ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 103ರ ಸಂಭ್ರಮ ಕಾರ್ಯಕ್ರಮವು ರಾಜಧಾನಿ ಜನರ ಪಾಲಿಗೆ ನರಕ ಸಧೃಶವಾಗಿ ಮಾರ್ಪಟ್ಟಿದೆ.
ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಣವು ಆಯೋಜಿಸಿರುವ ಈ ಕಾರ್ಯಕ್ರಮವು ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕೋಟಿಗಟ್ಟಲೇ ವ್ಯಯಿಸಿ ಇಮೇಜ್ ವೃದ್ದಿಗೆ ಕಸರತ್ತು ನಡೆದಿದೆ. ಎಲ್ಲೆಡೆ ಜಾಹೀರಾತು ನೀಡಿ ಲಕ್ಷಾಂತರ ಜನರನ್ನು ಕರೆಸಲಾಗಿದೆ.
ಆದ್ರೆ ನಗರದ ಕೇಂದ್ರ ಭಾಗವಾಗಿರುವ ಅರಮನೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದು ಟ್ರಾಫಿಕ್ ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ. ಒಂದು ರೀತಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಬಣದ ಶಕ್ತಿ ಪ್ರದರ್ಶನದ ವೇದಿಕೆಯಂತೆ ಸಮ್ಮೇಳನ ನಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಕರೆಸಲಾಗಿದೆ.
ಬೃಹತ್ ಸಮ್ಮೇಳನಕ್ಕೆ ಸಾವಿರಾರು ವಾಹನಗಳಲ್ಲಿ ಸರ್ಕಾರಿ ನೌಕರರು, ಬೆಂಬಲಿಗರು, ಆಗಮಿಸುತ್ತಿರುವುದರಿಂದ ಬೆಂಗಳೂರಿನ ಹೃದಯ ಭಾಗ ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿದೆ. ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಸೇರಿದಂತೆ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲಾರದೆ ಬೆಂಗಳೂರು ಜನ, ಹಾಗೂ ಬೆಂಗಳೂರಿಗೆ ಬೇರೆ ಬೇರೆ ಕೆಲಸಗಳಿಗೆ ಬಂದು ಹೋಗುವ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಷಡಾಕ್ಷರಿಯನ್ನು ಸಿದ್ದರಾಮಯ್ಯ ಸರ್ಕಾರ ಎತ್ತಂಗಡಿ ಮಾಡಿತ್ತು. ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಿತ್ತು. ಅಧಿಕಾರ ದುರ್ಬಳಕೆ ಮಾಡಿ, ಸರ್ಕಾರಕ್ಕೆ 71 ಲಕ್ಷ ನಷ್ಟ ಮಾಡಿದ್ದ ಆರೋಪದಡಿ ಷಡಾಕ್ಷರಿಯನ್ನು ಸರ್ಕಾರ ಎತ್ತಂಗಡಿ ಮಾಡಿತ್ತು.
ಶಿವಮೊಗ್ಗದ ಲೆಕ್ಕ ಪತ್ರ ಇಲಾಖೆಯಲ್ಲಿ ಅಕೌಂಟ್ ಸೂಪರಿಟೆಂಡೆಂಟ್ ಆಗಿದ್ದ ಷಡಾಕ್ಷರಿಯನ್ನು ಕೋಲಾರದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿತ್ತು. ಷಡಾಕ್ಷರಿ ಚಟುವಟಿಕೆಗಳ ವಿರುದ್ಧ ನೌಕರರ ಸಂಘದ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಸಚಿವ ಮಧುಬಂಗಾರಪ್ಪ ಮುಖ್ಯಮಂತ್ರಿಗೆ ಪತ್ರ ಬರೆದು ಷಡಾಕ್ಷರಿಯವರನ್ನು ಎತ್ತಂಗಡಿ ಮಾಡಿಸಿದ್ದರು. ಸದಾ ಯಡಿಯೂರಪ್ಪ ಕುಟುಂಬದ ಜೊತೆ ಗುರುತಿಸಿಕೊಳ್ಳುತ್ತಿದ್ದ ಷಡಾಕ್ಷರಿ ನೌಕರರ ಸಂಘದ ಹೆಸರು ಬಳಸಿಕೊಂಡು ರಾಜಕೀಯ ಪ್ರವೇಶಕ್ಕೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೊನ್ನೆಯಷ್ಟೆ, ರಾಜ್ಯ ಸರ್ಕಾರದ ಐಕ್ಯತಾ ಸಮಾವೇಶ ನಡೆಯಿತು..ಜನರಿಗೆ ತೊಂದರೆ ಆಗಬಾರದೆಂದು ಸರ್ಕಾರ ರಜಾ ದಿನಗಳಂದು ಸರ್ಕಾರ ಕಾರ್ಯಕ್ರಮ ಆಯೋಜಿಸಿತ್ತು. ಆದ್ರೆ, ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳಲು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ವರ್ಕಿಂಗ್ ಡೇ ದಿನ ಸಮಾವೇಶ ಹಮ್ಮಿಕೊಂಡು ಜನರಿಗೆ ಕಿರಿಕಿರಿ ಉಂಟು ಮಾಡಿರೋದು, ಜೊತೆಗೆ ಆಡಳಿತ ಯಂತ್ರ ಭಾಗಶಃ ಸ್ಥಗಿತಗೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.