Wednesday, June 25, 2025
26.8 C
Bengaluru
Google search engine
LIVE
ಮನೆ#Exclusive Newsಪಂಚಮಸಾಲಿ ಹೋರಾಟಗಾರರ ವಿರುದ್ದ ಲಾಠಿಚಾರ್ಜ್ : ಸರ್ಕಾರದ ವಿರುದ್ಧ ಶ್ರೀಗಳ ಆಕ್ರೋಶ

ಪಂಚಮಸಾಲಿ ಹೋರಾಟಗಾರರ ವಿರುದ್ದ ಲಾಠಿಚಾರ್ಜ್ : ಸರ್ಕಾರದ ವಿರುದ್ಧ ಶ್ರೀಗಳ ಆಕ್ರೋಶ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅನುಮತಿ ಇಲ್ಲದೇ ಲಾಠಿ ಚಾರ್ಜ್​ ಆಗಿದ್ದು ಹೇಗೆ? ಹಾಗೆ ಆಗಿದ್ದೇ ನಿಜವಾದರೆ ಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಜಯಮೃತ್ಯುಂಜಯ ಶ್ರೀ ಆಗ್ರಹಿಸಿದ್ದಾರೆ. ಜತೆಗೆ, ನಿಮ್ಮ ಊರಲ್ಲಿ ರಸ್ತೆ ತಡೆದು ಹೋರಾಟ ಮಾಡಿ ಎಂದು ಎಲ್ಲಾ ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್​ ನಡೆಸಿದ್ದಕ್ಕೆ ಮತ್ತಷ್ಟು ಕೆರಳಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ ಎಂದಿದ್ದಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ನು ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನಮ್ಮ ಸಮುದಾಯದ ಶಾಸಕರನ್ನು ಗುರಿಯಾಗಿಸಿಕೊಂಡು ನಮಗೆ ಮೀಸಲಾತಿ ನೀಡಲು ನಿರಾಕರಿಸಿದರೆ ನಾವು ಬೇರೆ ದಾರಿ ಹಿಡಿಯಬೇಕಾಗುತ್ತದೆ. ಸಮುದಾಯದ ಮೇಲೆ ದಾಳಿ ಮಾಡುವ ಮೂಲಕ ಈ ಸರ್ಕಾರ ಕೆಟ್ಟ ಹೆಸರು ಗಳಿಸುತ್ತಿದೆ. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡುವ ಬದಲು ಲಾಠಿ ಚಾರ್ಜ್ ಮಾಡಿದ ಎಡಿಜಿಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸಮುದಾಯದ ಮುಖಂಡರಿಗೆ ಮನವಿ ಮಾಡಿದರು. ಈ ತಿಂಗಳು ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ದಾಳಿಯನ್ನು ಖಂಡಿಸಿ ಪ್ರತಿಭಟನೆಗಳನ್ನು ಆಯೋಜಿಸುವಂತೆ ಶ್ರೀಗಳು ಸಮುದಾಯದ ಮುಖಂಡರಿಗೆ ಕರೆ ನೀಡಿದರು.

ಹಿರೇಬಾಗೇವಾಡಿ ಮತ್ತು ಹತ್ತರಗಿ ಟೋಲ್ ಪ್ಲಾಜಾದಲ್ಲಿ ಧರಣಿ ನಡೆಸುತ್ತೇವೆ. ನಮ್ಮ ಪ್ರತಿಭಟನೆಯು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ನ್ಯಾಯಸಮ್ಮತವಾದ ರೀತಿಯಲ್ಲಿ ಮುಂದುವರಿಯುತ್ತದೆ. ಇನ್ನು ಮುಂದೆ ಹೋರಾಟ ತೀವ್ರಗೊಳಿಸಲಾಗುವುದು. ಲಿಂಗಾಯತ ಚಳವಳಿಯನ್ನು ಹತ್ತಿಕ್ಕಲು ಈ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

12 ಜಿಲ್ಲೆಗಳಲ್ಲಿ ನಡೆದ ನಮ್ಮ ಪ್ರತಿಭಟನೆಯಲ್ಲಿ ಯಾವುದೇ ಒತ್ತಡ ಅಥವಾ ಕಿರುಕುಳ ಇರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದೆವು. ಆದರೆ ನ್ಯಾಯಾಲಯದ ಷರತ್ತುಗಳ ಪ್ರಕಾರ ನಾವು ನಿಗದಿತ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಸಿಎಂ ಅವರನ್ನು ಭೇಟಿಯಾಗಲು ಬಯಸಿದ್ದೆವು. ಆದರೆ, ನಮ್ಮ ಬೇಡಿಕೆಗಳನ್ನು ಆಲಿಸಲು ಸರ್ಕಾರ ಮೂವರು ಸಚಿವರನ್ನು ಕಳುಹಿಸಿದೆ. ಸಿಎಂ ಪ್ರತಿಭಟನಾ ಸ್ಥಳಕ್ಕೆ ಬರುವುದಿಲ್ಲ ಎಂದು ಹೇಳಿದ ಎಡಿಜಿಪಿ, ಸುವರ್ಣ ವಿಧಾನ ಸೌಧಕ್ಕೆ ಸಿಎಂ ಇರುವ ಜಾಗಕ್ಕೆ ತೆರಳಲು ನಿರ್ಧರಿಸಿದ್ದೇವೆ. ನಾವು ಮುಂದೆ ಹೋಗಲುಪ ಪ್ರಯತ್ನಿಸಿದಾಗ, ಸೇಡು ತೀರಿಸಿಕೊಳ್ಳಲು ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ಆರಂಭಿಸಿದರು. ಅವರು ಚಳವಳಿಗಾರರು ಮತ್ತು ವಕೀಲರ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಹೇಳಿದರು. ಹಿಂದಿನ ಯಾವ ಮುಖ್ಯಮಂತ್ರಿಗಳೂ ಚಳವಳಿಗಾರರ ಮೇಲೆ ಇಂತಹ ದಾಳಿ ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತರನ್ನು ಗುರಿಯಾಗಿಸುವ ಅಗತ್ಯವಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments