Tuesday, June 24, 2025
26.6 C
Bengaluru
Google search engine
LIVE
ಮನೆ#Exclusive NewsTop Newsದರ್ಶನ್‌ ಮಧ್ಯಂತರ ಜಾಮೀನು ಅರ್ಜಿ: ನಾಳೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ದರ್ಶನ್‌ ಮಧ್ಯಂತರ ಜಾಮೀನು ಅರ್ಜಿ: ನಾಳೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್‌ ಮಧ್ಯಂತರ ಜಾಮೀನು ಆದೇಶವನ್ನು ಹೈಕೋರ್ಟ್‌ ನಾಳೆಗೆ ಕಾಯ್ದಿರಿಸಿದೆ.

ಮಧ್ಯಂತರ ಜಾಮೀನು ಕೋರಿ ನಟ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇಂದು ನಡೆಸಿತು. ಆರೋಪಿ ಪರ ವಕೀಲ ನಾಗೇಶ್‌ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ. ದರ್ಶನ್‌ ಜಾಮೀನು ಭವಿಷ್ಯ ಬುಧವಾರ ನಿರ್ಧಾರ ಆಗಲಿದೆ.

ನಿನ್ನೆಯ ವಾದ ಮುಂದುವರೆಸಿದ ದರ್ಶನ್ ವಕೀಲ ಸಿವಿ ನಾಗೇಶ್, ‘ದರ್ಶನ್ ಬೆನ್ನು ಹುರಿಯ ಸಮಸ್ಯೆ ಯಿಂದ ಬಳಲುತ್ತಿದ್ದಾರೆ. ಅದರಿಂದ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೇ ಮುಂದುವರಿದರೆ ಇನ್ನಷ್ಟು ಸಮಸ್ಯೆ ಆಗಬಹುದು. ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಿಂದ ರಕ್ತಪರಿಚಲನೆ ಆಗುತ್ತಿಲ್ಲ …‌ ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗದು, ಅದಕ್ಕೆ ಶಸ್ತ್ರಚಿಕಿತ್ಸೆಯನ್ನೇ ಮಾಡಿಸಬೇಕು. ಈ ಹಿಂದೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾಗ ಆರೋಗ್ಯ ಸಮಸ್ಯೆ ಉಲ್ಲೇಖಿಸಿರಲಿಲ್ಲ. ಆದರೆ ಈಗ ಸಮಸ್ಯೆ ಉಲ್ಬಣ ಆಗಿರುವ ಕಾರಣ ಕೇಳುತ್ತಿದ್ದೇವೆ. ದರ್ಶನ್​ಗೆ ಮಧ್ಯಂತರ ಜಾಮೀನು ನೀಡಬೇಕು’ ಎಂದು ವಾದಿಸಿದರು.

ಕೆಲವು ಹಳೆಯ ಪ್ರಕರಣಗಳು ಹಾಗೂ ಸುಪ್ರೀಂಕೋರ್ಟ್​ನ ಕೆಲ ಆದೇಶಗಳನ್ನು ಸಹ ಉಲ್ಲೇಖ ಮಾಡಿದ ಸಿವಿ ನಾಗೇಶ್ ಅವರು, ‘ಆರೋಗ್ಯ ಪ್ರತಿಯೊಬ್ಬರ ಹಕ್ಕು. ಅವರು ಎಂಥಹಾ ಕಠಿಣ ಪ್ರಕರಣದಲ್ಲಿ ಸಿಲುಕಿದ್ದರೂ ಸಹ ಮೆರಿಟ್​ಗಳನ್ನು ನೋಡದೆ ಜಾಮೀನು ನೀಡಬೇಕಾಗುತ್ತದೆ. ಈ ಹಿಂದೆ ಇಂಥಹಾ ಹಲವು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ ಎಂದರು.

ಆದರೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್, ‘ರೋಗಿಯ ತಪಾಸಣೆ ಮಾಡಿರುವ ವೈದ್ಯರು ಮುಂದೊಮ್ಮೆ ಸಮಸ್ಯೆ ಆಗಬಹುದು ಎಂದಿದ್ದಾರೆ, ಅಲ್ಲದೆ ಹಿಂದಿನ ವರದಿಯಲ್ಲಿ ಅಷ್ಟೇನೂ ಸಮಸ್ಯೆ ಇಲ್ಲ ಎಂದಿದ್ದರು, ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಇತ್ತು ಅದನ್ನು ಸರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದರು. ಆದರೆ ಅದಕ್ಕೆ ಸ್ವತಃ ಜಡ್ಜ್ ಪ್ರಶ್ನೆ ಕೇಳಿ, ‘ಮುಂದೆ ಆದಾಗ ಅದನ್ನು ಸರಿ ಮಾಡಬಹುದೇ?, ವಿಚಾರಣಾಧೀನ ಖೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ’ ಎಂದರು. ‘ಈ ಹಿಂದಿನ ವರದಿಯಲ್ಲಿ ಹಾಗಿದೆ, ಆದರೆ ಜೈಲು ಸೇರಿದ ಮೇಲಿನ ವರದಿಯಲ್ಲಿ ಅನಾರೋಗ್ಯ ಎಂದಿದೆಯಲ್ಲ. ಈಗಿನ ವರದಿಯನ್ನು ಪರಿಗಣಿಸಬೇಕು ತಾನೆ? ಎಂದು ಜಡ್ಜ್ ಎಸ್​ಪಿಪಿ ಪ್ರಸನ್ನ ಅವರನ್ನು ಪ್ರಶ್ನೆ ಮಾಡಿದರು.

ಎಸ್​ಪಿಪಿ ಪ್ರಸನ್ನ ಅವರು, ‘ವೈದ್ಯರ ವರದಿಯಲ್ಲಿ ಯಾವ ರೀತಿಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ? ಎಷ್ಟು ದಿನದ ಅವಶ್ಯಕತೆ ಇದೆ? ಎಲ್ಲಿ ಆಪರೇಷನ್ ಮಾಡಲಾಗುವುದು ಎಂಬಿತ್ಯಾದಿ ಮಾಹಿತಿ ಇಲ್ಲ’ ಎಂದರು. ಇದಕ್ಕೆ ಉತ್ತರಿಸಿದ ಸಿವಿ ನಾಗೇಶ್ ಅವರು, ‘ದರ್ಶನ್ ಮೈಸೂರು ನಿವಾಸಿ ಆಗಿದ್ದು, ಈ ಹಿಂದೆ ಒಮ್ಮೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈಗಲೂ ಸಹ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಯಾರೂ ಮೈಸೂರಿನಲ್ಲಿ ಇಲ್ಲ’ ಎಂದರು.

ಇಬ್ಬರೂ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 30 ಅಂದರೆ ನಾಳೆಗೆ ಮುಂದೂಡಿದರು. ನಾಳೆ ದರ್ಶನ್​ಗೆ ಷರತ್ತು ಸಹಿತ ಮಧ್ಯಂತರ ಜಾಮೀನು ಮಂಜೂರಾಗುವ ಸಾಧ್ಯತೆ ದಟ್ಟವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments