ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಅದರ ಬೆನ್ನಲ್ಲೇ ಮಾರ್ಚ್ 26ರ ರಾಮನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸುವ ಬೃಹತ್ ಸಮಾರಂಭ ಆಯೋಜನೆಯಾಗಿದೆ. ಮುಂಬೈನ ಪ್ರಸಿದ್ಧ ಗೇಟ್-ವೇ ಆಫ್ ಇಂಡಿಯಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಈ ‘ಮದರ್ ಆಫ್ ಆಲ್ ಈವೆಂಟ್ಸ್’ನಲ್ಲಿ ರಾವಣನ ಪಾತ್ರಧಾರಿ ಯಶ್, ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಸೇರಿದಂತೆ ಇಡೀ ತಾರಾಗಣವನ್ನು ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಲಾಗುವುದು. ‘ಟಾಕ್ಸಿಕ್’ ಬಿಡುಗಡೆಯಾದ ಕೇವಲ ಒಂದು ವಾರದಲ್ಲೇ ಈ ಬೃಹತ್ ಘೋಷಣೆ ಹೊರಬೀಳುತ್ತಿರುವುದು ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ದಿನವನ್ನು ಅತ್ಯಂತ ವಿಶೇಷವಾಗಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾದಲ್ಲಿ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಗ್ರಾಫಿಕ್ಸ್ ಪೋಸ್ಟರ್ಗಳ ಬದಲಾಗಿ, ಈ ಬಾರಿ ನಟರು ತಮ್ಮ ಪಾತ್ರಗಳ ಲುಕ್ನಲ್ಲಿ ನೇರವಾಗಿ ಕಾಣಿಸಿಕೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆ. ರಣಬೀರ್ ಕಪೂರ್ ಅವರು ವೈಯಕ್ತಿಕವಾಗಿ ಅನೇಕ ಬಾಲಿವುಡ್ ಗಣ್ಯರಿಗೆ ಆಹ್ವಾನ ನೀಡಿದ್ದು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.


