ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಉಂಡಿರುವ ಬಿಜೆಪಿ ಪಕ್ಷ ಲೋಕಾ ಚುನಾವಣೆಗೆ ಮೈ ಕೊಡವಿ ಯುದ್ದ ಸಾರಲು ಆರಂಭಿಸಿದೆ. ಈಗಾಗಲೆ ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿ ಮಹತ್ತರ ಬದಲಾವಣೆ ನಡೆಸಿರುವ ಪಕ್ಷ ಜಿಲ್ಲಾ ಮಟ್ಟದಲ್ಲೂ ಇದೇ ಹಾದಿ ಹಿಡಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಮರ್ಥ ನಾಯಕನನ್ನು ಹುಡುಕುವ ತಯಾರಿ ನಡೆಸಿದೆ. ಈ ಬಗ್ಗೆ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

ಬಿಜೆಪಿ ಪಕ್ಷಕ್ಕೆ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಯಕನ ಕೊರತೆ ಇಂದು ನಿನ್ನೆಯದಲ್ಲ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ಡಾ.ಕೆ.ಸುಧಾಕರ್ ಬಿಜೆಪಿಯಲ್ಲಿ ಗೆಲುವು ಸಾಧಿಸಿ ಮಂತ್ರಿಯಾಗಿದ್ದು ಈಗ ಇತಿಹಾಸ. ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಬಿಜೆಪಿ ಎಲ್ಲೂ ಗೆಲ್ಲೋಕೆ ಆಗಿಲ್ಲ. ಈಗ ಇಡೀ ಜಿಲ್ಲೆಯಲ್ಲಿ ಬಿಜೆಪಿ ಹವಾ ಸೃಷ್ಟಿಯಾಗಿದೆ. ಅದ್ರೆ ಅದನ್ನು ಮತಗಳಾಗಿ ಬದಲಿಸುವ ಪ್ರಕ್ರಿಯೆಯಲ್ಲಿ ಪ್ರಬಲ ನಾಯಕನ ಕೊರತೆ ಎದ್ದು ಕಾಣ್ತಿದೆ. ಇದಕ್ಕಾಗಿ ಬಿಜೆಪಿ ಪಕ್ಷ ಪ್ರಬಲ ನಾಯಕನನ್ನು ಜಿಲ್ಲಾಧ್ಯಕ್ಷನನ್ನಾಗಿ ನೇಮಿಸಲು ಹೊರಟಿದೆ.

ಈಗ ಇಡೀ ಜಿಲ್ಲೆಯಲ್ಲಿ ಪ್ರಬಲವಾಗಿ ಕೇಳಿ ಬರ್ತಿರೋ ಮೊದಲ ಹೆಸರು ರಾಮಚಂದ್ರಗೌಡರದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿ. ಆದ್ರೆ ಕ್ಷೇತ್ರಕ್ಕೆ ಬಂದ ಮೂರೇ ತಿಂಗಳಲ್ಲಿ ಬಿಜೆಪಿ ಪರವಾದ ಕೂಗು ಕೇಳಿ ಬರುವಂತೆ ಮಾಡಿರುವ ನಾಯಕ. ಇವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಡಿದ್ರೆ ಸಂಘಟನೆಗೆ ನೆರವಾಗಲಿದೆ, ಅಲ್ಲದೆ ಲೋಕಾ ಚುನಾವಣೆಯಲ್ಲಿ ಮತಗಳ ಸೆಳೆತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನುವ ಕೂಗು ಕೇಳಿ ಬರ್ತಿದೆ.
ಚಿಂತಾಮಣಿ ತಾಲ್ಲೂಕಿನ ವೇಣುಗೋಪಾಲ್ ಕೂಡ ಇದೇ ಪಟ್ಟಿಯಲ್ಲಿ ಉಳಿದಿದ್ದಾರೆ. ಅವರು ಕೂಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಆಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ರು. ಕಾರಣಾಂತರಗಳಿಂದ ಸೋಲಿನ ಕಹಿ ಅನುಭವಿಸಬೇಕಾಯ್ತು. ಒಟ್ಟಾರೆ ಚಿಂತಾಮಣಿಯಿಂದ ವೇಣುಗೋಪಾಲ್, ಶಿಡ್ಲಘಟ್ಟದಿಂದ ಸೀಕಲ್ ರಾಮಚಂದ್ರಗೌಡ ಇಬ್ಬರ ಹೆಸರು ಅಂತಿಮ ಪಟ್ಟಿಗೆ ಬಂದು ನಿಂತಿದೆ.

ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದ್ರೆ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಈಗಾಗಲೆ ಚಿಂತಾಮಣಿಯಿಂದ ಸತ್ಯನಾರಾಯಣ ಮಹೇಶ್, ಗೌರಿಬಿದನೂರಿನಿಂದ ರವಿನಾರಾಯಣರೆಡ್ಡಿ, ಚಿಕ್ಕಬಳ್ಳಾಪುರದಿಂದ ಡಾ.ಮಂಜುನಾಥ್, ಬಾಗೇಪಲ್ಲಿಯಿಂದ ರಾಮಲಿಂಗಪ್ಪ ಆಯ್ಕೆಯಾಗಿದ್ದಾರೆ. ಉಳಿದಂತೆ ಶಿಡ್ಲಘಟ್ಟ ಕ್ಷೇತ್ರದಿಂದ ಇದುವರೆಗೂ ಜಿಲ್ಲಾಧ್ಯಕ್ಷರಾಗಿ ಯಾರೂ ಆಯ್ಕೆಯಾಗಿಲ್ಲ. ಈ ಮಾನದಂಡದಿಂದ ಸೀಕಲ್ ರಾಮಚಂದ್ರಗೌಡರ ಆಯ್ಕೆ ಅನಿವಾರ್ಯವಾಗಿದೆ. ಆದ್ರೆ ಓಬಿಸಿ ಮಾನ್ಯತೆ ನೀಡಲು ಚಿಂತಾಮಣಿಯ ಗೋಪಿ ಅಥವಾ ಪ್ರತಾಪ್ ಆಯ್ಕೆಗೆ ಒಲವು ತೋರಬಹುದು. ಅಲ್ಲದೆ ಇತ್ತೀಚೆಗೆ ಕಾಣಿಸಿಕೊಂಡಿರುವ ಸಂದೀಪ್ ರೆಡ್ಡಿ ಕೂಡ ಸಾಮಾನ್ಯ ವರ್ಗದಲ್ಲಿ ಕಾಂಪಿಟೇಟರ್ ಆಗಬಹುದು. ಏನಾಗುತ್ತೋ ಕಾದು ನೋಡಬೇಕು.