
ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಸಂಘಟನೆಯ ಶಂಕಿತ ಭಯೋತ್ಪಾದಕ ಅಬ್ದುಲ್ ರೆಹಮಾನ್ (20), ಫರಿದಾಬಾದ್ ಜೈಲಿನಲ್ಲಿ ಸಹ ಕೈದಿಯಿಂದ ಹತ್ಯೆಗೀಡಾಗಿದ್ದಾನೆ.
ಜೈಲಿನಲ್ಲಿದ್ದ ಕಾಶ್ಮೀರಿ ಮೂಲದ ಅರುಣ್ ಚೌಧರಿ ಎಂಬ ಯುವಕನೊಂದಿಗೆ ಜಗಳ ನಡೆದಿದ್ದು, ಈ ವೇಳೆ ಅರುಣ್ ಹರಿತವಾದ ವಸ್ತುವಿನಿಂದ ರೆಹಮಾನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಭೀಕರ ಘಟನೆಯ ಬೆನ್ನಲ್ಲೇ ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಉತ್ತರ ಪ್ರದೇಶದ ಫೈಜಾಬಾದ್ ಮೂಲದವನಾದ ಅಬ್ದುಲ್ ರೆಹಮಾನ್ನನ್ನು ಕಳೆದ ಮಾರ್ಚ್ 2, 2025 ರಂದು ಗುಜರಾತ್ ಎಟಿಎಸ್ ಮತ್ತು ಹರಿಯಾಣ ಎಸ್ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಫರಿದಾಬಾದ್ನ ಪಾಲಿ ಗ್ರಾಮದಲ್ಲಿ ಬಂಧಿಸಿತ್ತು. ಬಂಧನದ ಸಮಯದಲ್ಲಿ ಈತನ ಬಳಿ ಎರಡು ಹ್ಯಾಂಡ್ ಗ್ರೆನೇಡ್ಗಳು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿತ್ತು. ನಕಲಿ ಗುರುತಿನ ಚೀಟಿ ಬಳಸಿ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ರೆಹಮಾನ್, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿತ್ತು.
ರೆಹಮಾನ್ ವಶಪಡಿಸಿಕೊಳ್ಳಲಾಗಿದ್ದ ಡಿಜಿಟಲ್ ಸಾಧನಗಳಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದ ವೀಡಿಯೊಗಳು, ದಾಳಿಯ ನಕ್ಷೆಗಳು ಮತ್ತು ಉಗ್ರಗಾಮಿ ಸಂಘಟನೆಗಳಿಂದ ಬಂದಿದ್ದ ನಿರ್ದಿಷ್ಟ ಸೂಚನೆಗಳು ಲಭ್ಯವಾಗಿದ್ದವು. ರಾಮ ಮಂದಿರದ ಮೇಲೆ ಬೃಹತ್ ದಾಳಿ ನಡೆಸಲು ಈತ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ, ದಾಳಿಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸುವ ಮೊದಲೇ ಭದ್ರತಾ ಪಡೆಗಳು ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದವು. ಇಂತಹ ಹೈ-ಪ್ರೊಫೈಲ್ ಆರೋಪಿ ಜೈಲಿನೊಳಗೆ ಹತ್ಯೆಯಾಗಿರುವುದು ಈಗ ಕಾನೂನು ಸುವ್ಯವಸ್ಥೆ ಮತ್ತು ಜೈಲು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸಿದೆ.




