ಆನೇಕಲ್ : ಊರು ಅಂದ್ಮೇಲೆ ಕೆರೆ, ಕುಂಟೆ, ಶಾಲೆ, ಬೀದಿ ಅಂತ ಇದ್ದೇ ಇರ್ತದೆ. ಅಲ್ಲಿ ಜನ ವಸತಿ ಇದೆ ಅಂದ್ಮೇಲೆ ಸ್ಮಶಾನ ಅಂತ ಇರ್ಲೇ ಬೇಕು ಸ್ವತಂತ್ರ ಬಂದು ದಶಕಗಳು ಕಳೆದರೂ ಈವರೆಗೂ ಮೀಸಲು ಕ್ಷೇತ್ರದಲ್ಲಿ ಸ್ಮಶಾನಗಳಿಲ್ಲದೆ ಆನೇಕಲ್ ತಾಲೂಕು ಪರಿತಪಿಸುತ್ತಲೇ ಇದೆ. ಇದು ಚಳವಳಿಗಳ ನಾಡಾದರೂ ಈವರೆವಿಗೂ ಹತ್ತು ಹಲವು ಹೋರಾಟಗಳು ಮಾಡುತ್ತಲೇ ಬರುತ್ತಿದ್ದರೂ ಸ್ಮಶಾನವಿರಲಿ, ಸ್ಮಶಾನದ ಜಮೀನು ಒತ್ತುವರಿಯನ್ನು ತಡೆಯುವಲ್ಲಿ ತಾಲೂಕು ಆಡಳಿತ ವಿಫಲಗೊಂಡಿದೆ. ಇಂತಹ ಸಂದರ್ಭದಲ್ಲಿ ಕದಸಂಸ ಆನೇಕಲ್ ತಾಲೂಕು ಸಮಿತಿ ತಮಟೆ ಚಳವಳಿಯನ್ನು ಶಕ್ತಿ ಕೇಂದ್ರದ ಮುಂದೆ ಹಮ್ಮಿಕೊಂಡಿದ್ದಾರೆ.
ಪಟ್ಟಣದ ಶಿವಾಜಿ ವೃತ್ತದಿಂದ ತಾಲೂಕು ಕಚೇರಿವರೆಗೂ ನೀಲಿ ಬಾವುಟಗಳೊಂದಿಗೆ ಬಂದ ಪ್ರತಿಭಟನಾ ಮೆರವಣಿಗೆಯಲ್ಲಿ ಕಂದಾಯ ಇಲಾಖೆ ಹಾಗು ಆಳಿದ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸುವ ದಿಕ್ಕಾರ ಕೂಗಿದರು. ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ದೊಮ್ಮಸಂದ್ರ ಮುನಿರಾಜು ದಲಿತ ಅಲ್ಪಸಂಖ್ಯಾತರ ಸ್ಮಶಾನಗಳನ್ನ ಕಸ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆದೇಶ ಮಾಡಿದ್ದಾರೆ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು, ತಹಶೀಲ್ದಾರರಿಗೂ ಇದೊಂದು ಮೀಸಲುಕ್ಷೇತ್ರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗರ ದಲಿತರಿಗೆ ಸ್ಮಶಾನ ಅತ್ಯವಶ್ಯ ಎಂಬ ಇಂಗಿತ ಜ್ಞಾನವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.