ಬೆಂಗಳೂರು : ಎಎಪಿ ನೇಮಕ ಸ್ಕ್ಯಾಮ್ ನಲ್ಲಿ ಆರೋಪಿಯಾಗಿದ್ದ ಪ್ರಾಸಿಕ್ಯೂಷನ್ ಡಿಪಾರ್ಟ್ಮೆಂಟ್ ಆಡಳಿತಾಧಿಕಾರಿ ನಾರಾಯಣಸ್ವಾಮಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.
ವರ್ಗಾವಣೆ ಆದೇಶ ಪಾಲಿಸದೆ ನಾನು ಸಿಂಹ ನಿಮ್ಮನ್ನು ಜೈಲಿಗಟ್ಟುತ್ತೇನೆ ಎಂದು ಧಮ್ಕಿ ಹಾಕಿದ್ದರೆಂದು ನಾರಾಯಣಸ್ವಾಮಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ಬಿದ್ದಿದೆ. ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ, ಕೋರ್ಟ್ ಆದೇಶ ಪಾಲಿಸಲ್ಲ ನನಗೆ ನಾನೇ ಸಿಂಹ ಅಂತ ಕೂಗಾಡಿ, ಕಚೇರಿಯಲ್ಲಿ ಜನಸಾಮಾನ್ಯರ ಎದುರೇ ರಂಪಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ಅಭಿಯೋಜನಾ ಇಲಾಖೆಯ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿದ್ದ ನಾರಾಣಸ್ವಾಮಿಯನ್ನು, ಜುಲೈ 30 ರಂದು ಮಂಗಳೂರಿಗೆ ವರ್ಗಾಯಿಸಲಾಗಿತ್ತು. ಇವರ ಜಾಗಕ್ಕೆ ಶ್ರೀನಿವಾಸ್ ಎಂಬುವವರನ್ನು ಹಾಕಲಾಗಿತ್ತು. ವರ್ಗಾವಣೆ ಆದೇಶ ಪ್ರಶ್ನಿಸಿ ನಾರಾಯಣಸ್ವಾಮಿ KAT ಮೊರೆಹೋಗಿದ್ರು. ಅಕ್ಟೋಬರ್ 21ರಂದು ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು.
ಆದ್ರೂ, ನಾರಾಯಣಸ್ವಾಮಿ ಮತ್ತೆ ಅನಧಿಕೃತವಾಗಿ ಕಚೇರಿಗೆ ಆಗಮಿಸಿ ಏರು ಧ್ವನಿಯಲ್ಲಿ ಮಾತನಾಡಿ ಭಯಯದ ವಾತಾವರಣ ಸೃಷ್ಟಿಸಿದ್ದಾರೆ. ಪ್ರಭಾರಿ ಆಡಳಿತಾಧಿಕಾರಿ ಅಧಿಕಾರಿ ಶ್ರೀನಿವಾಸ್ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎಸ್ ಪಾಟೀಲ್ ದೂರು ನೀಡಿದ್ದಾರೆ.
ಅಕ್ರಮವಾಗಿ ಕಚೇರಿಗೆ ಆಗಮಿಸಿದ್ದ ನಾರಾಯಣ ಸ್ವಾಮಿ ಅವರು, ನನ್ನನ್ನು ಕೇಳುವವರು ಯಾರಿದ್ದಾರೆ, ನಾನು ಸಿಂಹ.. ನಾನು ಪೆನ್ನು ಹಿಡಿಯುವುದಿಲ್ಲ ಹಿಡಿದದರೆ, ಅಧಿಕಾರಿ ಮತ್ತು ಇತರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸುತ್ತೇನೆ, ಅಂತಾ ಕೂಗಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅನಧಿಕೃತವಾಗಿ ದಾಖಲೆಗಳಿಗೆ ಸಹಿ ಹಾಕಿ ಕಾನೂನು ಉಲ್ಲಂಘನೆ ಮಾಡಿರುವ ಮತ್ತು ಸರ್ಕಾರದ ಆದೇಶವನ್ನು ಪಾಲಿಸದೆ ಕಚೇರಿ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿರುವ ಆರೋಪ ಸಂಬಂಧ ನಾರಾಯಣ ಸ್ವಾಮಿ ವಿರುದ್ಧ ಬಿಎನ್ ಎಸ್ ಆಕ್ಟ್ ನ ಸೆಕ್ಷನ್ 132, 198, 224, 329/4,351-2, 352 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.