ಪ್ರಧಾನಿ ಮೋದಿಗೆ ಮಿತ್ರ ವಿಭೂಷಣ ಗೌರವ..!

ಶ್ರೀಲಂಕಾದಿಂದ ಶಾಂತಿಪಾಲನಾ ಪಡೆಯನ್ನು ಭಾರತ ಹಿಂದಕ್ಕೆ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಲಂಕಾ ಜತೆ ರಕ್ಷಣಾ ಸಹಕಾರ ಒಪ್ಪಂದ ಏರ್ಪಟ್ಟಿದೆ. ಶ್ರೀಲಂಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ರಕ್ಷಣೆ, ಕಡಲ ಭದ್ರತೆ, ಇಂಧನ, ಆರೋಗ್ಯ, ಡಿಜಿಟಲ್ ಆರ್ಥಿಕತೆ, ವ್ಯಾಪಾರ ವಿಷಯಗಳ ಪ್ರಮುಖ 7 ತಿಳವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅಲ್ಲದೆ ದ್ವೀಪ ರಾಷ್ಟ್ರಕ್ಕೆ ಆರ್ಥಿಕ ನೆರವು ಕೂಡಾ ಭಾರತ ನೀಡಲಿದೆ.ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಕಡಲ ಭದ್ರತೆ, ರಕ್ಷಣಾ ಸಹಕಾರ, ಇಂಧನ, ಆರೋಗ್ಯ ಕ್ಷೇತ್ರ ಒಳಗೊಂಡು ಏಳು ಒಪ್ಪಂದಗಳಿಗೆ ಭಾರತ-ಶ್ರೀಲಂಕಾ ಸಹಿ ಹಾಕಿವೆ. ನೆರೆಯ ಚೀನಾದ ವಿಸ್ತರಣಾ ತಂತ್ರಗಾರಿಕೆ ತಡೆಯಲು ದ್ವೀಪ ರಾಷ್ಟ್ರದ ಜತೆಗಿನ ಸಂಬಂಧಕ್ಕೆ ಮತ್ತಷ್ಟು ಒತ್ತು ನೀಡಲು ಭಾರತ ಮುಂದಾಗಿದೆ.
ಮೂರು ದಿನಗಳ ಕಾಲ ಶ್ರೀಲಂಕಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಹಳೀಯ ದೇಶದ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕ ಜತೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಾದೇಶಿಕ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಉಭಯ ನಾಯಕರು, ರಕ್ಷಣೆ, ಇಂಧನ, ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ವ್ಯಾಪಾರ, ಕಡಲ ಭದ್ರತೆ ವಿಚಾರದಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಮುಂದುವರಿಯಲು ಪ್ರಮುಖ 7 ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಇಂಧನ ಕೊರತೆ ನೀಗಿಸಲು ಭಾರತದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಹಾಗೂ ಲಂಕಾದ ಸಿಲೋನ್ ವಿದ್ಯುತ್ ಮಂಡಳಿ ಜತೆಗಿನ ಜಂಟಿ ಒಪ್ಪಂದದಂತೆ ಮೋದಿ ಸಹಿ ಹಾಕಿದರು.
ರಕ್ಷಣಾ ಸಹಕಾರ ಒಪ್ಪಂದ..!
ಮೂರು ದಶಕಗಳ ಹಿಂದೆ ಶ್ರೀಲಂಕಾದಿಂದ ಶಾಂತಿಪಾಲನಾ ಪಡೆಯನ್ನು ಭಾರತ ಹಿಂದಕ್ಕೆ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಲಂಕಾ ಜತೆ ರಕ್ಷಣಾ ಸಹಕಾರ ಒಪ್ಪಂದ ಏರ್ಪಟ್ಟಿದೆ. ಸಾಗರದಲ್ಲಿ ಜಂಟಿ ಸಮರಾಭ್ಯಾಸ, ಕಡಲ ಮೇಲೆ ಜಂಟಿ ಕಣ್ಗಾವಲು, ರಕ್ಷಣಾ ಪಡೆಗೆ ಬೇಕಾದ ಅಗತ್ಯ ಮಿಲಿಟರಿ ನೆರವು ನೀಡುವುದು ಒಪ್ಪಂದದ ಮೂಲ ಉದ್ದೇಶವಾಗಿದೆ.
ಮೀನುಗಾರರ ಬಿಡುಗಡೆ..!
ಇದೇ ವೇಳೆ ಲಂಕಾ ನೌಕಾಪಡೆ ಬಂಧಿಸಿರುವ ತಮಿಳುನಾಡಿನ ಮೀನುಗಾರರನ್ನು ವಿಚಾರ ಪ್ರಸ್ತಾಪಿಸಿದ ಮೋದಿ ಅವರು, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಬಂಧಿತರಾಗಿರುವ ಎಲ್ಲಾಮೀನುಗಾರರನ್ನು ದೋಣಿಗಳ ಸಮೇತ ಬಿಡುಗಡೆ ಮಾಡುವುದಕ್ಕೆ ಶ್ರೀಲಂಕಾ ಸಮ್ಮತಿಸಿದೆ.ಮತ್ತೊಂದೆಡೆ ಲಂಕಾದಲ್ಲಿರುವ ಭಾರತೀಯ ಮೂಲದ ತಮಿಳು ಸಮುದಾಯದ ಜನರನ್ನು ಭೇಟಿಯಾದ ಮೋದಿ ಅವರು, ”ಭಾರತೀಯ ಮೂಲದ ಜನರಿಗೆ ಕೇಂದ್ರ ಸರಕಾರ ಆರೋಗ್ಯ ಚಿಕಿತ್ಸಾ ವ್ಯವಸ್ಥೆ ಒಳಗೊಂಡ 10 ಸಾವಿರ ಮನೆ ನಿರ್ಮಾಣ ಮಾಡಿಕೊಡಲಿದೆ,” ಎಂದು ಭರವಸೆ ನೀಡಿದರು.
ಆರ್ಥಿಕ ನೆರವಿನ ಭರವಸೆ..!
ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ದ್ವೀಪ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ಮೋದಿ ಭರವಸೆ ನೀಡಿದರು. ಶ್ರೀಲಂಕಾಗೆ 2022ರಲ್ಲಿ ನೀಡಲಾದ 40 ಲಕ್ಷ ಡಾಲರ್ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡುವ ಸಹಕಾರ ನೀಡಲು ಭಾರತ ಸಮ್ಮತಿಸಿದೆ. ”ಕಳೆದ ಆರು ತಿಂಗಳಲ್ಲಿ ಲಂಕಾಗೆ ನೀಡಲಾಗಿರುವ 10 ಕೋಟಿ ರೂಪಾಯಿ ಸಾಲವನ್ನು ಅನುದಾನವಾಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿದ್ವೀಪರಾಷ್ಟ್ರದ ಪೂರ್ವ ರಾಜ್ಯಗಳ ಅಭಿವೃದ್ಧಿಗೆ 2.4 ಶತಕೋಟಿ ರೂ. ಹಣ ನೀಡಲಾಗುವುದು,” ಎಂದು ಮೋದಿ ತಿಳಿಸಿದರು.
ಮೋದಿಗೆ ‘ಮಿತ್ರ ವಿಭೂಷಣ’ ಗೌರವ..!
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಮಿತ್ರ ವಿಭೂಷಣ’ ನೀಡಿ ಗೌರವಿಸಲಾಯಿತು. ಎರಡು ದೇಶಗಳ ಸಂಬಂಧ ಬಲಪಡಿಸಲು ಶ್ರಮ, ಉಭಯ ದೇಶಗಳ ನಡುವಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆ ಬೆಳವಣಿಗೆಗೆ ಶ್ರಮಿಸಿದ ಹಿನ್ನೆಲೆಯಲ್ಲಿಗೌರವ ನೀಡಲಾಗಿದೆ.
ಯಾವ ಕ್ಷೇತ್ರಗಳಲ್ಲಿ ಒಪ್ಪಂದ..?
ರಕ್ಷಣೆ, ಕಡಲ ಭದ್ರತೆ, ಇಂಧನ, ಆರೋಗ್ಯ, ಡಿಜಿಟಲ್ ಆರ್ಥಿಕತೆ, ವ್ಯಾಪಾರ




