ಸತ್ತಿದ್ದ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ;ಎಚ್ಚರಗೊಂಡ ‘ಮೃತ’ ವ್ಯಕ್ತಿ!

ಬಾಗಲಕೋಟೆ: ಜಮಖಂಡಿ ಪಟ್ಟಣದ ಮೋಮಿನ್ ಗಲ್ಲಿಯ ನಿವಾಸಿ 65 ವರ್ಷದ ಹಾಜಿ ಮುಬಾರಕ್ ಅವಟಿ ಎಂಬುವವರು ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಇವರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ವೈದ್ಯರ ಸಲಹೆಗೆ ವಿರುದ್ಧವಾಗಿ ಅವರನ್ನು ಮನೆಗೆ ಕರೆತರಲು ನಿರ್ಧರಿಸಿ ವೆಂಟಿಲೇಟರ್ ತೆರವುಗೊಳಿಸಿದ್ದರು.
ಉಸಿರಾಟ ಸ್ಥಗಿತಗೊಂಡಂತೆ ಕಂಡಿದ್ದರಿಂದ ಮುಬಾರಕ್ ಮೃತಪಟ್ಟಿದ್ದಾರೆ ಎಂದು ಭಾವಿಸಿದ ಸಂಬಂಧಿಕರು, ಅಂತ್ಯಸಂಸ್ಕಾರದ ಸಿದ್ಧತೆಗಾಗಿ ಅವರನ್ನು ಜಮಖಂಡಿಗೆ ವಾಹನದಲ್ಲಿ ಕರೆತರುತ್ತಿದ್ದರು. ಮಾರ್ಗಮಧ್ಯೆ ಲೋಕಾಪುರ ಸಮೀಪ ರಸ್ತೆಯ ಹಂಪ್ಸ್ ದಾಟುವಾಗ ವಾಹನಕ್ಕೆ ಉಂಟಾದ ಜರ್ಕ್ನಿಂದಾಗಿ ಮುಬಾರಕ್ ಅವರಲ್ಲಿ ಇದ್ದಕ್ಕಿದ್ದಂತೆ ಉಸಿರಾಟ ಮತ್ತು ಚಲನೆ ಕಂಡುಬಂದಿದ್ದು, ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಅವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಮುಂದೆ ಸಾವಿರಾರು ಜನರು ಜಮಾಯಿಸಿದ್ದು, ವೈದ್ಯರಾದ ಡಾ. ಕೃಷ್ಣಾ ಬಣ್ಣದ ಅವರು ದಾಖಲೆಗಳನ್ನು ಪರಿಶೀಲಿಸಿ ಬೆಳಗಾವಿಯ ಆಸ್ಪತ್ರೆಯಲ್ಲಿ ಮರಣ ದೃಢೀಕರಣ ಪತ್ರ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಜಮಖಂಡಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಮನೆಗೆ ಹೋಗಬೇಕಿದ್ದ ವ್ಯಕ್ತಿ ಮರಳಿ ಬಂದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.



