ಬೆಂಗಳೂರು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಸಂಸತ್ ಮೇಲೆ ದಾಳಿ ಮಾಡಿದವರಿಗೂ ನಿಮಗೂ ಏನು ಸಂಬಂಧ ಎಂದರೆ ಅದರ ಬಗ್ಗೆ ಕೇಳಬೇಡಿ ತಾಯಿ ಚಾಮುಂಡಿ ನೋಡಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ. ತಾಯಿ ಚಾಮುಂಡೇಶ್ವರಿ 2023ರಲ್ಲಿ ನಮಗೆ 135 ಸೀಟು ಕೊಟ್ಟು ನಮ್ಮನ್ನು ನೋಡಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಿಮ್ಮನ್ನೂ ನೋಡಿಕೊಳ್ಳುತ್ತಾಳೆ. ನೀವು ಜವಾಬ್ದಾರಿಯುತ ಸಂಸದರಾಗಿ ಉತ್ತರ ನೀಡುತ್ತಾರೆ. ನೀವು ಎಂದಾದರೂ ಮಾಧ್ಯಮಗೋಷ್ಠಿ ನಡೆಸಿದ ಉದಾಹರಣೆಗಳಿವೆಯೇ? ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸಿದ್ದೀರಾ? ಇವರು ಕೂಡ ಮೋದಿ, ಅಮಿತ್ ಶಾ ಅವರ ತಳಿ. ಅವರಂತೆಯೇ ಮಾಧ್ಯಮಗಳ ಪ್ರಶ್ನೆ ಎದುರಿಸುವುದಿಲ್ಲ. ನಿಮಗೂ ಮನೋರಂಜನ್ ಗೂ ಏನು ಸಂಬಂಧ, ನಿಮ್ಮ ಖಾತೆಯಿಂದ ಮನೋರಂಜನ್ ಖಾತೆಗೆ ಹಣ ರವಾನೆಯಾಗಿರುವ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದಾರೆ ನಿಜವೇ? ನಿಮಗೂ ಅವರಿಗೂ ಸಂಬಂಧವಿಲ್ಲದಿದ್ದರೆ ಸಂಬಂಧ ಇಲ್ಲ ಎಂದು ಬಹಿರಂಗವಾಗಿ ಹೇಳಿ ಎಂದು ಪ್ರತಾಪ್ ಸಿಂಹರವರಿಗೆ ಕೆಪಸಿಸಿ ವಕ್ತಾರ ಲಕ್ಷ್ಮಣ್ ಟಾಂಗ್ ನೀಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಸಹೋದರ ರೌಡಿಸಂ ಮಾಡ್ತಾರೆ – ಲಕ್ಷ್ಮಣ್ ಆರೋಪ
ಸಂಸದ ಪ್ರತಾಪ್ ಸಿಂಹರವರ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪ್ರತಾಪ್ ಸಿಂಹ ಅವರ ಸಹೋದರ ಸುಮಾರು 250 ಮರಗಳನ್ನು ಬೇಲೂರು ತಾಲೂಕಿನಲ್ಲಿ ಕಡಿಸಿದ್ದಾರೆ. ಸಾಗುವನಿ, ಭೀಟೆ, ನೇರಳೆ, ಮಾವು, ಹಲಸು, ಆಲವಾಣ ಮರಗಳನ್ನು ಕಡಿಸಿದ್ದಾರೆ. 3.16 ಎಕರೆ ಜಮೀನನ್ನು ಶುಂಠಿ ಬೆಳೆಯಲು ಜಯಮ್ಮ ಎಂಬುವವರಿಂದ ಖರೀದಿ ಮಾಡಿದ್ದೀರಿ. ಪಕ್ಕದ ಅರಣ್ಯದ ಮರಗಳನ್ನು ಕಡಿದಿದ್ದೀರಿ. ಪ್ರತಾಪ್ ಸಿಂಹ ಅವರ ಸಹೋದರ ಬೇಲ್ ಮೇಲೆ ಬಿಡುಗಡೆಯಾಗಿರೋ ಬಗ್ಗೆ 2021ರಲ್ಲಿ ಪತ್ರಿಕೆಯಲ್ಲಿ ವರದಿ ಯಾಗಿತ್ತು. ವಿಕ್ರಂ ಸಿಂಹ ಹಾಗೂ 8 ಜನ ಇತರರು ಗ್ಯಾಂಬ್ಲಿಂಗ್ ವಿಚಾರವಾಗಿ ಸಕಲೇಶಪುರ ಪೊಲೀಸರಿಂದ ಬಂಧಿಸಿದ್ದು, ಸೆಕ್ಷನ್ 79 ಹಾಗೂ 80ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಲ್ಲದೇ ರೌಡಿಸಂ ಮಾಡಿಕೊಂಡಿದ್ದಾರೆ. ಸಕಲೇಶಪುರದಲ್ಲಿ 30 ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಿದ್ದೀರಿ. ಅದು ಯಾರದ್ದು ಎಂದು ಹೇಳುತ್ತೀರಾ ಪ್ರತಾಪ್ ಸಿಂಹ ಅವರೇ? ಇದಕ್ಕೂ ಚಾಮುಂಡಿ ತಾಯಿ ನೋಡಿಕೊಳ್ಳುತ್ತಾಳೆ ಎಂದು ಹೇಳಬೇಡಿ.

ಪ್ರತಾಪ್ ಸಿಂಹರವರೇ ಮೈಸೂರಿಗೆ ನಿಮ್ಮ ಕೊಡುಗೆ ಏನು..?
ವಿಜಯನಗರ 3ನ ಹಂತದಲ್ಲಿ ಐಶಾರಾಮಿ ಬಂಗಲೆ ನಿರ್ಮಾಣವಾಗುತ್ತಿದ್ದು ಅದು ಯಾರಿಗೆ ಸೇರಿದ್ದು? ಸಿದ್ದರಾಮಯ್ಯ ಬೈದರೆ ಪ್ರಚಾರ ಸಿಗುತ್ತೆ ಎಂದು ನೀವು ಮಾತನಾಡುತ್ತೀರಿ. ಮೈಸೂರಿಗೆ ನಿಮ್ಮ ಕೊಡುಗೆ ಏನು? ಕೊಡಗು ಜಿಲ್ಲೆಗೆ ನಿಮ್ಮ ಕೊಡುಗೆ ಏನು? ನಾವು ಇನ್ನು ನಾಲ್ಕು ಪಕ್ಷಗಳ ಜತೆ ಸೇರಿ ಸ್ಪರ್ಧೆ ಮಾಡಿದರೂ ಮುಂದಿನ ಬಾರಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ. ಮಾತು ಕಮ್ಮಿ ಮಾಡಿ ಯಾವ ಕೆಲಸ ಮಾಡಿದ್ದೀರಿ ಎಂದು ಹೇಳಿ. ಸುಳ್ಳೇ ಬಿಜೆಪಿ ಮನೆದೇವರು. ಅದಕ್ಕಾಗಿ ದಿನಬೆಳಗಾದರೆ ಸುಳ್ಳು ಹೇಳುತ್ತಾರೆ.