ಚಿಕ್ಕಮಗಳೂರು: ವಾಯುವಿಹಾರಕ್ಕೆ ತೆರಳಿದ್ದ ವೃದ್ದ ವೈದ್ಯರೊಬ್ಬರು ದಾರಿ ತಪ್ಪಿ ಕಾಡಿನಲ್ಲಿ ಕಳೆದುಹೋಗಿದ್ದು, ಪೊಲೀಸ್ ಇಲಾಖೆಯ ಶ್ವಾನದ ಸಹಾಯದಿಂದ ವೃದ್ದ ವ್ಯಕ್ತಿಯನ್ನು ಪತ್ತೆ ಮಾಡಿರುವ ಘಟನೆ ಕೊಪ್ಪ ತಾಲೂಕಿನ ಗುಣವಂತೆ ಕಾಡಿನಲ್ಲಿ ನಡೆದಿದೆ..
ನವೆಂಬರ್ 2ರಂದು ವಿಹಾರಕ್ಕೆಂದು ಬಂದಿದ್ದ ವೈದ್ಯ ವೆಂಕಟೇಗೌಡ ದಾರಿ ತಪ್ಪಿ ಕಾಡು ಸೇರಿದ್ದರು. ಮರೆವಿನ ಖಾಯಿಲೆ ಇದ್ದ ವೃದ್ದ ವೈದ್ಯ ವ್ಯಕ್ತಿಗೆ ವಾಪಸ್ ಬರಲು ಗೊತ್ತಾಗಿಲ್ಲ. ನಾಲ್ಕು ದಿನ ಕಾಡಲ್ಲಿ ಸುತ್ತಾಡಿ ಕಾಡಲ್ಲೇ ಉಳಿದಿದ್ದರು. ಮನೆಯವರು ಪೊಲೀಸರಿಗೆ ದೂರು ನೀಡಿ, ಕಾಡು-ಮೇಡು-ಹಳ್ಳಿ ಎಲ್ಲಾ ಹುಡುಕಿದ್ದರೂ ಎಲ್ಲೂ ಸಿಕ್ಕಿರಲಿಲ್ಲ.
ಕಾಡಂಚಿನ ಗುಣವಂತೆ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು ಹೋಗಿರುವ ಮಾಹಿತಿ ತಿಳಿದು ಬಂದಿದ್ದು, ಎಸ್ಪಿ ವಿಕ್ರಂ ಸೂಚನೆ ಮೇರೆಗೆ ಶ್ವಾನವನ್ನು ತಂದು ಹುಡುಕಾಟ ನಡೆಸಿದಾಗ ಕಾಡಂಚಲ್ಲಿ ಅವರ ಪಂಚೆ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಹೊರಟಿದ್ದ ಪೊಲೀಸ್ ಶ್ವಾನ 5 ಕಿ.ಮೀ. ದೂರದ ಕಾಡಿನಲ್ಲಿದ್ದ ವೈದ್ಯರನ್ನು ಪತ್ತೆ ಮಾಡಿದೆ. ಪೊಲೀಸ್ ಶ್ವಾನದ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


