ಅಯೋಧ್ಯೆ : ಸಿಯಾವರ್ ರಾಮಚಂದ್ರ ಕೀ ಜೈಕಾರದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಮ್ಮ ರಾಮ ಬಂದ. ಎಲ್ಲ ತ್ಯಾಗ ಬಲಿದಾನದ ನಂತರ ರಾಮ ಬಂದ. ಗರ್ಭಗುಡಿಯೊಳಗೆ ದೈವೀ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿಸಿಕೊಂಡು ನಿಮ್ಮೆದುರು ನಿಂತಿದ್ದೇನೆ ಎಂದು ಹೇಳಿದರು.
ನಮ್ಮ ಬಾಲರಾಮ ಇನ್ನು ಟೆಂಟ್ನಲ್ಲಿ ಇರಲ್ಲ. ನಮ್ಮ ಬಾಲರಾಮ ಇನ್ನು ದಿವ್ಯ ಮಂದಿರದಲ್ಲಿ ಇರಲಿದ್ದಾನೆ. ಎಲ್ಲಿ ರಾಮನ ಕಾರ್ಯವಾಗುತ್ತದೋ ಅಲ್ಲಿ ಪವನಪುತ್ರ ಹನುಮಾನ ಇರುತ್ತಾನೆ. ಸೀತಾ ಮಾತೆ, ಲಕ್ಷ್ಮಣ ಎಲ್ಲರಿಗೂ ನಮಿಸುತ್ತೇನೆ.
ಪ್ರಭು ಶ್ರೀರಾಮ ಚಂದ್ರನ ಕ್ಷಮೆ ಕೂಡ ಕೇಳ್ತೇನೆ. ಮಂದಿರ ನಿರ್ಮಾಣಕ್ಕೆ ಬಹಳ ವರ್ಷ ಬೇಕಾಯಿತು. ನಮ್ಮ ಕೆಲಸ ಕಾರ್ಯಗಳಲ್ಲಿ, ನಡವಳಿಕೆಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದನ್ನು ಕ್ಷಮಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ನನಗೆ ಇಂದು ಬಹಳ ಖಚಿತವಾದ ವಿಶ್ವಾಸವಿದೆ. ಪ್ರಭು ಶ್ರೀರಾಮಚಂದ್ರ ನಮ್ಮನ್ನು ಕ್ಷಮಿಸುತ್ತಾನೆ ಎಂಬ ನಂಬಿಕೆ ಇಂದು ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಶ್ರೀರಾಮನಿಲ್ಲದೇ ಅನೇಕ ವರ್ಷಗಳಿಂದ ಎದುರಿಸುತ್ತಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಲಿದೆ. ರಾಮ ಬಂದಿದ್ದಾನೆ. ಅಯೋಧ್ಯೆ ವಾಸಿಗಳು, ದೇಶವಾಸಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಅದೆಲ್ಲ ನಿವಾರಣೆಯಾಗಲಿದೆ.
ಭಾರತದ ಸಂವಿದಾನದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಕಾನೂನು ಹೋರಾಟ ನಡೆಸಿ ಗೆಲುವು ಸಿಕ್ಕಿದೆ. ಪ್ರಭು ರಾಮಚಂದ್ರನ ಮಂದಿರವನ್ನೂ ಕಾನೂನು ಬದ್ಧವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದರು. ಇಡೀ ದೇಶ ಇಂದು ದೀಪಾವಳಿ ಆಚರಿಸಲಾಗುತ್ತಿದೆ. ಇಂದು ಸಂಜೆ ಮನೆ ಮನೆಗಳಲ್ಲಿ ದೀಪ ಹೊತ್ತಿಸಿ ರಾಮನ ಆಗಮನವನ್ನು ತೋರಿಸುವ ಕೆಲಸ ಮಾಡಲಾಗುತ್ತದೆ. ನಿನ್ನೆ ಧನುಷ್ಕೋಟಿಗೆ ಹೋಗಿದ್ದೆ. ಅಂದು ಕಾಲಚಕ್ರ ಬದಲಾದಂತೆ ಇಂದು ಕೂಡ ಕಾಲಚಕ್ರ ತಿರುಗಲಿದೆ. ದೇಶಕ್ಕೆ ದೇಶವಾಸಿಗಳಿಗೆ ಶುಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಯೋಧ್ಯೆ ರಾಮ ಮಂದಿರದ ಬಾಲರಾಮನ ಕಾರಣ 12 ದಿನಗಳ ವ್ರತಾನುಷ್ಠಾನದ ವೇಳೆ ದೇಶದ ಪ್ರತಿ ಮೂಲೆ ಮೂಲೆಯಲ್ಲಿರುವ ರಾಮನ ಜೊತೆಗೆ ನಂಟು ಹೊಂದಿರುವ ಕ್ಷೇತ್ರ ಭೇಟಿ ಸಾಧ್ಯವಾಯಿತು. ಲೇಪಾಕ್ಷಿ, ಶ್ರೀರಂಗ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಪವಿತ್ರಾತ್ಮಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ರಾಮಾಯಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜನರು ಆರಾಧಿಸುತ್ತಿರುವ ಕೀರ್ತನೆಗಳನ್ನು ಆಲಿಸುವ ಅವಕಾಶ ಸಿಕ್ಕಿತು. ರಾಮ ಜನಮಾನಸದಲ್ಲಿ ನೆಲೆಸಿದ್ದಾನೆ. ರಾಮರಸವು ಜೀವನ ಪ್ರವಾಹದಂತೆ ನಿರಂತರವಾಗಿ ಹರಿಯುತ್ತಿರುತ್ತದೆ. ಪ್ರಾಚೀನ ಕಾಲದಿಂದಲೂ ಭಾರತೀಯರು ರಾಮರಸವನ್ನು ಸೇವಿಸುತ್ತ ಬಂದಿದ್ದಾರೆ. ರಾಮಕಥೆ ಜನ ಜೀವನದಲ್ಲಿ ಮಿಳಿತವಾಗಿದೆ.
ಈ ಐತಿಹಾಸಿಕ ಸಮಯದಲ್ಲಿ, ರಾಮ ಕೆಲಸದಲ್ಲಿ ಅನೇಕಾನೇಕ ಜನರ ಕಾರಣ ಈ ರಾಮ ಮಂದಿರ ನಿರ್ಮಾಣವಾಯಿತು ಎಂಬುದನ್ನು ಸ್ಮರಿಸಬೇಕು. ಸಂತರು, ಕರಸೇವಕರು ಎಲ್ಲರ ತ್ಯಾಗ ಬಲಿದಾನ ಫಲ ಈ ರಾಮ ಮಂದಿರ. ನಮಗೆ ಈ ಸನ್ನಿವೇಶವು ವಿಜಯದ ಸಂದರ್ಭವಷ್ಟೇ ಅಲ್ಲ, ವಿನಯದ ಸಂದರ್ಭವೂ ಹೌದು.
ಸಂಸ್ಕೃತಿ, ಇತಿಹಾಸವನ್ನು ಮರೆತ ದೇಶಗಳು ಅವನತಿ ಹೊಂದಿವೆ. ಇದು ಇತಿಹಾಸದಲ್ಲಿ ಸಾಬೀತಾಗಿರುವ ವಿಚಾರ. ಭಾರತದ ವಿಚಾರದಲ್ಲಿ ಹಾಗಾಗಿಲ್ಲ. ಈಗ ಭಾರತ ಮತ್ತೆ ಪುಟಿದೇಳಲಿದೆ. ಈ ಮಂದಿರ ನಿರ್ಮಾಣದ ಮೂಲಕ ಭಾರತದ ಭವಿಷ್ಯ ಉಜ್ವಲವಾಗಲಿದೆ.