Monday, June 23, 2025
25.9 C
Bengaluru
Google search engine
LIVE
ಮನೆಜಿಲ್ಲೆಪಿಡಿಓ ವರ್ತನೆಗೆ ಬೇಸರ: ಪಂಚಾಯ್ತಿ ಸದಸ್ಯರ ಸಾಮೂಹಿಕ ರಾಜೀನಾಮೆ..!

ಪಿಡಿಓ ವರ್ತನೆಗೆ ಬೇಸರ: ಪಂಚಾಯ್ತಿ ಸದಸ್ಯರ ಸಾಮೂಹಿಕ ರಾಜೀನಾಮೆ..!

ಚಿತ್ರದುರ್ಗ : ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮಪಂಚಾಯಿತಿ ಪಿಡಿಓ ಚಂದ್ರಕಲಾ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಹಾಗೂ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಪಿಡಿಓ ವಿಫಲರಾಗಿದ್ದಾರೆ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿದ್ದು, ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಮ ಪಂಚಾಯ್ತಿಯಲ್ಲಿ 15 ಜನ ಸದಸ್ಯರಿದ್ದಾರೆ. ಉಪಾಧ್ಯಕ್ಷರು ಸೇರಿ 11 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರು ಕೂಡ ರಾಜೀನಾಮೆ ನೀಡಲಿದ್ದು, ಉಳಿದ ಮೂರು ಜನರು ವೈಯಕ್ತಿಕ ಕಾರಣಗಳಿಂದ ಬೇರೆ ಕಡೆಯಿದ್ದು, ಒಂದೆರಡು ದಿನಗಳಲ್ಲಿ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ರಾಜೀನಾಮೆ ಕುರಿತು ಪಂಚಾಯಿತಿ ಸದಸ್ಯ ಕೆ. ಬಸವರಾಜ್ ಮಾತನಾಡಿ ಪಂಚಾಯಿತಿ ಪಿಡಿಒ ಅವರು ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ಕೊಡದೇ ಅಗೌರವ ತೋರಿಸುತ್ತಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಇ-ಸ್ವತ್ತು ಮಾಡಿಕೊಡುತ್ತಿಲ್ಲ. ವಸತಿ ಯೋಜನೆಯ ಮನೆಗಳಿಗೆ ಹಣ ಬಿಲ್ ಪಾಸ್ ಮಾಡುತ್ತಿಲ್ಲ, ನರೇಗಾ ಯೋಜನೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ.

ಇನ್ನು, ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ಸದಸ್ಯರ ಪೋನ್ ಸಂಪರ್ಕಕ್ಕೆ ಸಿಗದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪಂಚಾಯ್ತಿಗೆ ಸರಿಯಾದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. NRG ಕಾಮಗಾರಿಯಲ್ಲಿ ರೈತರ ಸಾಮಾಗ್ರಿಗಳ ವೆಚ್ಚದ ಬಿಲ್ ಪೆಂಡಿಂಗ್ ಇದೆ. ಇನ್ನು ಪ್ರಮುಖವಾಗಿ ಕುಡಿಯುವ ನೀರಿನ ಸಾಮಾಗ್ರಿಗಳು ಹಾಗೂ ವಿದ್ಯುತ್ ಬಲ್ಬ್ ಗಳು ಅಂಗಡಿಯಲ್ಲಿ ಖರೀದಿ ಮಾಡಿದ್ದು, ಅಂಗಡಿ ಮಾಲೀಕರಿಗೆ ಬಿಲ್ ಕೊಡದೆ ಸತಾಯಿಸುತ್ತಿದ್ದಾರೆ. ಈ ರೀತಿ ಅನೇಕ ಸಮಸ್ಯೆಗಳಿವೆ. ಆಡಳಿತದಲ್ಲಿ ಅಸಹಾಯಕತೆ ತೋರಿರುವ ಪಿಡಿಓ ಚಂದ್ರಕಲಾ ಅವರ‌ ನಡುವಳಿಕೆಗೆ ಬೇಸತ್ತು ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments