ಇಡೀ ರಾಜ್ಯದಲ್ಲಿ ಭಿನ್ನ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದಾಗಿನಿಂದ ಒಂದಲ್ಲ ಒಂದು ಕಾರ್ಯಕ್ರಮ ಹಾಕಿಕೊಂಡು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಈಗ ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಹೆಸರಿನಲ್ಲಿ ಗ್ರಾಮ ಗ್ರಾಮಗಳಿಗೆ ಇಡೀ ತಾಲೂಕು ಆಡಳಿತವನ್ನೇ ಜೊತೆಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ತಾಲೂಕಿನ ಗುಯ್ಯಲಹಳ್ಳಿ. ಕಾಮಗಾನಹಳ್ಳಿ. ಸಾದೇನಹಳ್ಳಿ, ಶ್ಯಾಂಪುರ ಸೇರಿದಂತೆ ಹಲವು ಹಳ್ಳಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಗುಯ್ಯಲಹಳ್ಳಿ ಗ್ರಾಮದ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನ ಪ್ರದೀಪ್ ಈಶ್ವರ್ ಉದ್ಘಾಟಿಸಿದರು. ಈ ವೇಳೆ ಪ್ರದೀಪ್ ಈಶ್ವರ್ಗೆ ಹೂಮಳೆ ಸುರಿಸಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಜೈಭೀಮ್ ಘೋಷಣೆ ಕೂಗಿ ಅಂಬೇಡ್ಕರ್ಗೆ ಗೌರವ ಸೂಚಿಸಿದರು. ಇಷ್ಟೇ ಅಲ್ಲದೆ ಸಾದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿದ ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ವಿಜ್ಞಾನದ ಪಾಠ ಮಾಡುವ ಮೂಲಕ ಮೇಷ್ಟ್ರಾಗಿ ಕಾಣಿಸಿಕೊಂಡರು.
ನಮ್ಮ ಊರಿಗೆ ನಮ್ಮ ಶಾಸಕ ಪ್ರಾಜೆಕ್ಟ್ ಕಟ್ಟ ಕಡೆಯ ಜನರಿಗೂ ತಲುಪುತ್ತಿದ್ದು ಜನಸಾಮಾನ್ಯರಿಗೆ ಶಾಸಕ ಪ್ರದೀಪ್ ಈಶ್ವರ್ ತಮ್ಮ ಗ್ರಾಮಗಳಲ್ಲೇ ಸಿಗುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿನ ನಿವೇಶನ, ರಸ್ತೆ, ಸಾರಿಗೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುತ್ತಿರೋದ್ರಿಂದ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.