ಶಬರಿಮಲೆ: ಈ ಬಾರಿ ಶಬರಿಮಲೆ ಕ್ಷೇತ್ರ ಭೇಟಿಗೆ ಅಯ್ಯಪ್ಪ ಭಕ್ತರ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಶಬರಿಮಲೆಗೆ ದರ್ಶನಕ್ಕೆ ಬರುವ ಅಯ್ಯಪ್ಪ ಭಕ್ತರಿಗೆ ವರ್ಚುಯಲ್ ಸರತಿ ಸಾಲಿನಲ್ಲಿ ಕಾಯ್ದಿರಿಸದೇ ನೈಜ-ಸಮಯದ ಆನ್ಲೈನ್ ಬುಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ದೇವಸ್ವಂ ಮಂಡಳಿ ಪ್ರಕಟಿಸಿದೆ.
ಭಕ್ತರು ಆನ್ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿ ದರ್ಶನಕ್ಕೆ ದಿನ ನಿಗದಿಪಡಿಸಬೇಕು. ಆದರೆ ಡಿಸೆಂಬರ್ ಹಾಗೂ ಜ.14ರ ತನಕ ಎಲ್ಲ ದಿನವೂ ಬುಕ್ಕಿಂಗ್ ಪೂರ್ಣಗೊಂಡಿದೆ. ಪ್ರತಿ ದಿನ ಆನ್ಲೈನ್ ಬುಕ್ಕಿಂಗ್ಗೆ 70 ಸಾವಿರ ಅಯ್ಯಪ್ಪ ಭಕ್ತರಿಗೆ ಅವಕಾಶವಿದ್ದು, ಉಳಿದ 10 ಸಾವಿರ ಅಯ್ಯಪ್ಪ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಆನ್ಲೈನ್ ಮುಂಗಡ ಬುಕ್ಕಿಂಗ್ ಪೂರ್ಣಗೊಂಡಿರುವುದು ಮುಂದಿನ ದಿನಗಳಲ್ಲಿ ಅಯ್ಯಪ್ಪ ಭಕ್ತರ ಬರುವಿಕೆಯ ಮುನ್ಸೂಚನೆ ನೀಡುತ್ತಿದೆ. ಇದೀಗ ಮುಂಗಡ ಬುಕ್ಕಿಂಗ್ನಿಂದ ಯಾವುದೇ ರೀತಿಯಲ್ಲಿ ದಟ್ಟಣೆ ಇಲ್ಲದೆ ದರ್ಶನ ಸಾಧ್ಯವಾಗುತ್ತಿದೆ. ಪ್ರತಿ ದಿನ 80 ಸಾವಿರದಷ್ಟು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಪ್ರತಿ ದಿನ ಮುಂಜಾನೆ 3 ಗಂಟೆಗೆ ಶಬರಿಮಲೆ ಸನ್ನಿಧಾನದ ಗರ್ಭಗುಡಿಯ ಬಾಗಿಲು ತೆರೆದರೆ ರಾತ್ರಿ 11 ಗಂಟೆ ತನಕ ದರ್ಶನ ಸಾಧ್ಯವಾಗುತ್ತದೆ.
ಶಬರಿಮಲೆ ಸನ್ನಿದಾನದಲ್ಲಿ ಡಿ. 26ರಂದು ಮಂಡಲ ಪೂಜೆ ನಡೆಯಲಿದೆ. ಡಿ. 30ರಂದು ಮಕರ ಮಹೋತ್ಸವಕ್ಕಾಗಿ ಬಾಗಿಲು ತೆರೆಯಲಿದ್ದು, 2025ರ ಜ. 14ರಂದು ಮಕರ ಮಹೋತ್ಸವ ನಡೆಯಲಿದೆ. ಜ. 19ರವರೆಗೆ ಯಾತ್ರಾರ್ಥಿಗಳಿಗೆ ದರ್ಶನಕ್ಕಾಗಿ ದೇವಸ್ಥಾನಕ್ಕೆ ಪ್ರವೇಶ ಅವಕಾಶ ನೀಡಲಾಗುವುದು.
ಶಬರಿಮಲೆ: ಆನ್ಲೈನ್ ಬುಕ್ ಮಾಡಿದವರು ಸಮಯ ಪಾಲನೆಗೆ ಸೂಚನೆ
ಯಾತ್ರಾರ್ಥಿಗಳು ಸಮಯ ಕ್ರಮ ಅನುಸರಿಸದಿದ್ದರೆ ಪೊಲೀಸರು ಮತ್ತು ಇತರ ಯಾತ್ರಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ಬುಕ್ ಮಾಡಿದ ಸಮಯಕ್ಕೆ ತಲುಪಲು ಸಾಧ್ಯವಾಗದಿದ್ದರೆ ಕಾಯಬೇಕಾಗುವುದು. ಎಲ್ಲರಿಗೂ ದರ್ಶನ ಸೌಲಭ್ಯ ಒದಗಿಸಲಾಗುವುದು. ಆದರೆ ಸಮಯ ಕ್ರಮ ಪಾಲಿಸಿ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ.
ನಿಲಕ್ಕಲ್ ಮತ್ತು ಪಂಪಾದಲ್ಲಿ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಆನ್ಲೈನ್ ಬುಕ್ ಮಾಡಿದವರು ವೇಳಾಪಟ್ಟಿಯನ್ನು ಅನುಸರಿಸಬೇಕು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ. ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದರೆ ತಮಿಳುನಾಡಿನಿಂದ ಹೆಚ್ಚಿನ ಯಾತ್ರಾರ್ಥಿಗಳು ತಲುಪುವ ಸಾಧ್ಯತೆ ಇದೆ. ಹೀಗಾದರೆ ವಿಶೇಷ ವ್ಯವಸ್ಥೆ ಏರ್ಪಡಿಸಲು ಪೊಲೀಸರೊಂದಿಗೆ ಚರ್ಚಿಸಲಾಗುವುದು ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.