ನವದೆಹಲಿ: ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಚನ್ನಪಟ್ಟಣ ವಿಧಾನಸಭೆ ಚುನಾವಣೆ ನಂತರ ನವದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು; ಅತ್ಯಂತ ಗೌರವಪೂರ್ವಕವಾಗಿ ಅಮಿತ್ ಶಾ ಅವರನ್ನು ಸಂಸತ್ ಭವನದ ಅವರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಭೇಟಿ ಮಾಡಲಾಯಿತು. ಚನ್ನಪಟ್ಟಣ ಫಲಿತಾಂಶದ ಕುರಿತಾದ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡೆ ಹಾಗೂ ಅವರು ಕೂಡ ನನಗೆ ಧೈರ್ಯ ತುಂಬಿ ಉತ್ತಮವಾಗಿ ಕೆಲಸ ಮಾಡುವಂತೆ ಹುರಿದುಂಬಿಸಿದರು ಎಂದರು.
ಅಲ್ಲದೆ; ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಅವರಲ್ಲಿ ಚರ್ಚೆ ನಡೆಸಲಾಯಿತು. ಮೈತ್ರಿಕೂಟಗಳ ಎರಡೂ ಪಕ್ಷಗಳು ಒಟ್ಟಾಗಿ ಹೋಗಬೇಕು. ತಳಮಟ್ಟದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮಿತ್ ಶಾ ಅವರು ನನಗೆ ಮಾರ್ಗದರ್ಶನ ಮಾಡಿದರು ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೀ, ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಎಲ್ಲಾ ನಾಯಕರು ಸಂಘಟನೆಗೆ ಹೆಚ್ಚು ಕೊಡಬೇಕು ಎಂದು ಸಲಹೆ ಮಾಡಿದರು ಎಂಬುದಾಗಿ ನಿಖಿಲ್ ಅವರು ತಿಳಿಸಿದರು.
ಕರ್ನಾಟಕ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ. ಜನರು ಸಾಕಷ್ಟು ತೊಂದರೆಯಲ್ಲಿ ಇದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ನಾಯಕರು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಹೊಸ ಶಾಸಕನಿಗೆ ಶೋಭೆ ತರುವುದಿಲ್ಲ:
ದೇವೇಗೌಡರ ಬಗ್ಗೆ ಸಿ.ಪಿ.ಯೋಗೇಶ್ವರ್ ಕೀಳುಮಟ್ಟದ ಟೀಕೆ ಮಾಡಿರುವ ಬಗ್ಗೆ ತಿರುಗೇಟು ಕೊಟ್ಟ ನೀಡಿದ ನಿಖಿಲ್ ಅವರು, ಅರವತ್ತು ವರ್ಷ ಜನಪರವಾಗಿ ಕೆಲಸ ಮಾಡಿರುವ ದೇವೇಗೇಗೌಡರ ಬಗ್ಗೆ ಇಂಥ ಟೀಕೆ ಮಾಡುವುದು ಸರಿಯಲ್ಲ. ಅವರು ಶಾಸಕ ಸ್ಥಾನಕ್ಕೆ ಶೋಭೆ ತರುವ ಮಾತು ಆಡಬೇಕು ಎಂದು ತಿರುಗೇಟು ಕೊಟ್ಟರು.
ನಾನು ಸೋಲನ್ನು ತಲೆಬಾಗಿ ಸ್ವೀಕರಿಸಿದ್ದೇನೆ. ದೇವೇಗೌಡರು ನೆಲ, ಜಲದ ವಿಚಾರದಲ್ಲಿ ನಿರಂತರ ಹೋರಾಟ ನಡೆಸಿದ್ದಾರೆ. ಈಗಲೂ ಯುವ ಸಂಸದರು ನಾಚುವಂತೆ ಅವರು ಶಿಸ್ತುಬದ್ದವಾಗಿ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಸಲುವಾಗಿ ಅವರು ರಾಜಕೀಯದಲ್ಲಿ ಮುಂದುವರಿದ್ದಾರೆ, ಮುಂದೂ ಮುಂದುವರೆಯುತ್ತಾರೆ ಎಂದರು ಅವರು.
ದೇವೇಗೌಡರಿಗೆ ಮೋದಿಯವರೇ ಸ್ವತಃ ಫೋನ್ ಮಾಡಿ ರಾಜಕೀಯ ತೊರೆಯದಂತೆ ಹೇಳಿದ್ದರು. ರಾಜ್ಯಸಭೆ ತೊರೆಯದಂತೆ ಪ್ರಧಾನಿ ಮೋದಿಯವರೇ ಹೇಳಿ, ದೇಶಕ್ಕೆ ನಿಮ್ಮ ಮಾರ್ಗದರ್ಶನ ಬೇಕು ಎಂದು ಕೋರಿದ್ದರು. ಅವರ ಮಾತನ್ನು ಮೀರಲಾಗದೇ ದೇವೇಗೌಡರು ರಾಜಕಾರಣದಲ್ಲಿ ಇದ್ದಾರೆ ಎಂದು ನಿಖಿಲ್ ಅವರು ಹೇಳಿದರು.
ಹಾಸನಕ್ಕೆ ಸಮಾವೇಶಕ್ಕೆ ಉತ್ತರಿಸುವ ಅಗತ್ಯವಿಲ್ಲ:
ಹಾಸನದಲ್ಲಿ ಕಾಂಗ್ರೆಸ್ ನಾಯಕರು ಜನರ ತೆರಿಗೆ ಹಣದಲ್ಲಿ ಸಮಾವೇಶ ಮಾಡಿಕೊಂಡು ದೇವೆಗೌಡರ ಕುಟುಂಬವನ್ನು ನಿಂದಿಸಿದರು. ಅವರಿಗೆ ಸಮಾವೇಶ ಮಾಡಿ ಉತ್ತರ, ತಿರುಗೇಟು ಕೊಡಬೇಕು ಎಂದು ನಾನಾದರೂ ಭಾವಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಮಂಡ್ಯದಲ್ಲಿ ಅದ್ದೂರಿಯಾಗಿ ಕುಮಾರಸ್ವಾಮಿ ಅವರ ಜನ್ಮದಿನ ಆಚರಿಸಬೇಕು ಎಂದು ನಮ್ಮ ನಾಯಕರು ನಿರ್ಧಾರ ಮಾಡಿದ್ದರು. ಆದರೆ, ಮಂಡ್ಯ ಸಾಹಿತ್ಯ ಸಮ್ಮೇಳನ, ವಿಧಾನಸಭೆ ಮತ್ತು ಸಂಸತ್ ಅಧಿವೇಶನ ನಡೆಯುತ್ತಿದೆ. ಹಾಗೆಯೇ ಕೇಂದ್ರ ಸಚಿವರಿಗೂ ಸಾಕಷ್ಟು ಪೂರ್ವಾನಿಗದಿತ ಕಾರ್ಯಕ್ರಮಗಳು ಇವೆ. ಈ ಹಿನ್ನೆಲೆಯಲ್ಲಿ ಸ್ವತಃ ಕಾರ್ಯಕ್ರಮ ಬೇಡವೆಂದು ಸ್ವತಃ ಕುಮಾರಸ್ವಾಮಿ ಅವರೇ ಸೂಚಿಸಿದ್ದಾರೆ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಪಕ್ಷದ ಅಧ್ಯಕ್ಷ ಸ್ಥಾನ; ನಾನು ನಿಷ್ಠಾವಂತ ಕಾರ್ಯಕರ್ತ ಎಂದ ನಿಖಿಲ್:
ನಾನು ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯೇ ಹೊರತು ನಿಖಿಲ್ ಕುಮಾರಸ್ವಾಮಿ ಅವರಿಂದ ಜೆಡಿಎಸ್ ಅಲ್ಲ. ನನ್ನ ಇತಿಮಿತಿಗಳ ಬಗ್ಗೆ ನನಗೆ ಅರಿವಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ರಾಜಕೀಯ ಶಕ್ತಿ ತುಂಬುತೇನೆ. ಅವರ ಜತೆಯಲ್ಲಿ ನಿಂತು ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದಾರೆ, ಹಿರಿಯ ನಾಯಕರ ಮಾರ್ಗದರ್ಶನದಿಂದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ನಿಖಿಲ್ ಅವರು ತಿಳಿಸಿದರು.