ಬೆಂಗಳೂರು : 2023ರಿಂದ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮ್ಮದ್ ಪತ್ತೆಗಾಗಿ ಎನ್ಐಎ (NIA) ಬಲೆ ಬೀಸಿದೆ. ಈತನ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ ₹5 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದು, ಮಾಹಿತಿ ನೀಡುವವರ ವಿವರಗಳನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಂಪರ್ಕ ಹೊಂದಿರುವ ಈತ, ದೇಶದ ವಿವಿಧೆಡೆ ಪೋಸ್ಟರ್ಗಳ ಮೂಲಕ ‘ವಾಂಟೆಡ್’ ಲಿಸ್ಟ್ಗೆ ಸೇರ್ಪಡೆಯಾಗಿದ್ದಾನೆ.

2023ರ ಜುಲೈನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರ್.ಟಿ. ನಗರ ಮತ್ತು ಹೆಬ್ಬಾಳದಲ್ಲಿ ಐವರು ಶಂಕಿತರನ್ನು ಬಂಧಿಸಿ, ಭಾರಿ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಈ ತಂಡವು ಬೆಂಗಳೂರಿನ ಹಲವೆಡೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿತ್ತು. ಸಿಸಿಬಿ ಪೊಲೀಸರು ಈ ಸಂಚನ್ನು ವಿಫಲಗೊಳಿಸಿ ಐವರನ್ನು ಬಂಧಿಸಿದರೂ, ಈ ಇಡೀ ಜಾಲದ ಮಾಸ್ಟರ್ಮೈಂಡ್ ಜುನೈದ್ ಅಹಮ್ಮದ್ ಮಾತ್ರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.
ಜುನೈದ್ನ ಹಿನ್ನೆಲೆ ಗಮನಿಸಿದರೆ, ಈತ 2017ರ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾಗ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ಟಿ. ನಜೀರ್ನ ಸಂಪರ್ಕಕ್ಕೆ ಬಂದಿದ್ದ. ನಜೀರ್ ಪ್ರಚೋದನೆಯಿಂದ ಉಗ್ರ ಚಟುವಟಿಕೆಗಳತ್ತ ಆಕರ್ಷಿತನಾದ ಜುನೈದ್, ಹೊರಬಂದ ನಂತರ ಸ್ಫೋಟದ ಸಂಚು ರೂಪಿಸಿದ್ದ. ತನಿಖಾ ದಳದ ಪ್ರಕಾರ, ಜುನೈದ್ ಸುಮಾರು 9 ವಿವಿಧ ಹೆಸರುಗಳನ್ನು ಬಳಸಿಕೊಂಡು ಗುರುತು ಮರೆಮಾಚಿ ಓಡಾಡುತ್ತಿದ್ದಾನೆ. ಈ ಹಿಂದೆ ಜೈಲಿನಲ್ಲಿದ್ದ ನಜೀರ್ನನ್ನು ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಜುನೈದ್ ತಾಯಿ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ.


