ಹೈದರಾಬಾದ್ನ ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಆಗಿರುವ ಕಾರ್ಡಿನಲ್ ಪೂಲಾ ಆಂಥೋನಿ ಅವರು ಭಾರತೀಯ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಭಾರತೀಯ ಕ್ಯಾಥೋಲಿಕ್ ಸಮುದಾಯದ ಅತ್ಯುನ್ನತ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂದು ನಡೆದ 37ನೇ ಮಹಾಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ದಶಕಗಳ ಕಾಲ ಪಾಲನಾ ಸೇವೆ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅವರು ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚ್ನ ಮುನ್ನಡೆಸಲಿದ್ದಾರೆ.
ನವೆಂಬರ್ 15, 1961 ರಂದು ಕರ್ನೂಲ್ ಧರ್ಮಪ್ರಾಂತ್ಯದ ಪೋಲೂರು ಗ್ರಾಮದಲ್ಲಿ ಜನಿಸಿದ ಕಾರ್ಡಿನಲ್ ಪೂಲಾ ಆಂಥೋನಿ ಅವರು, ಬೆಂಗಳೂರಿನ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದರು. 1992 ರಲ್ಲಿ ಪುರೋಹಿತರಾಗಿ ದೀಕ್ಷೆ ಪಡೆದ ಇವರು, ಕಡಪಾ ಧರ್ಮಪ್ರಾಂತ್ಯದ ವಿವಿಧ ಚರ್ಚ್ಗಳಲ್ಲಿ ಸೇವೆ ಸಲ್ಲಿಸಿದರು. ಕೇವಲ ಧಾರ್ಮಿಕ ಸೇವೆಯಲ್ಲದೆ, ಅಮೆರಿಕಾದ ಶಿಕಾಗೋದ ಲೊಯೋಲಾ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಜಾಗತಿಕ ಮಟ್ಟದ ಶೈಕ್ಷಣಿಕ ಜ್ಞಾನವನ್ನೂ ಸಂಪಾದಿಸಿದ್ದಾರೆ.

ಕಾರ್ಡಿನಲ್ ಪೂಲಾ ಆಂಥೋನಿ ಅವರ ವೃತ್ತಿಜೀವನವು ಶಿಕ್ಷಣ ಮತ್ತು ಸಮಾಜ ಸೇವೆಯಲ್ಲೂ ಗಮನಾರ್ಹವಾಗಿದೆ. ‘ಕ್ರಿಶ್ಚಿಯನ್ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ಏಜಿಂಗ್’ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಕಡಪಾ ಧರ್ಮಪ್ರಾಂತ್ಯದ ಶಿಕ್ಷಣ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆ ಅಪಾರ. 2008 ರಲ್ಲಿ ಕರ್ನೂಲ್ ಬಿಷಪ್ ಆಗಿ ನೇಮಕಗೊಂಡ ಅವರು, 2020 ರಲ್ಲಿ ಹೈದರಾಬಾದ್ನ ಆರ್ಚ್ಬಿಷಪ್ ಆಗಿ ಪದೋನ್ನತಿ ಪಡೆದರು. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪೋಪ್ ಫ್ರಾನ್ಸಿಸ್ ಅವರು 2022 ರಲ್ಲಿ ಇವರನ್ನು ‘ಕಾರ್ಡಿನಲ್’ ಪದವಿಗೆ ಏರಿಸಿದ್ದರು. ನಂಬಿಕೆ ಮತ್ತು ಮಾನವ ಘನತೆಯ ರಕ್ಷಣೆಗೆ ಬದ್ಧರಾಗಿರುವ ಅವರ ನಾಯಕತ್ವದಲ್ಲಿ ಭಾರತೀಯ ಕ್ಯಾಥೋಲಿಕ್ ಚರ್ಚ್ ಮತ್ತಷ್ಟು ಸದೃಢಗೊಳ್ಳುವ ನಿರೀಕ್ಷೆಯಿದೆ.


