ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸುವುದಾಗಿ ನೆಲಮಂಗಲ ಶಾಸಕ ಶ್ರೀನಿವಾಸ್ಗೆ ವಂಚನೆ

ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುತ್ತೇನೆ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವು, ಉದ್ಯಮಿಗಳು, ರಾಜಕಾರಣಿಗಳಿಗೆ ಮೋಸ ಮಾಡಿದ್ದ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ನ ಮಾಜಿ ಆಪ್ತ ಸಹಾಯಕ ಮಾರುತಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ದರ್ಶನ ಮಾಡಿಸುತ್ತೇನೆ ಎಂದು 8 ಲಕ್ಷ ರೂ. ಹಣ ಪಡೆದು ಎಲ್ಲರಿಗೂ ನಾಮ ಹಾಕಿದ್ದ, ಜನವರಿ 14ರಂದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರ್ನಾಟಕದಿಂದ ಟಿಟಿಡಿಯ ಸದಸ್ಯರಾಗಿದ್ದ ಎಸ್ಆರ್ ವಿಶ್ವನಾಥ್, ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ಪಾಸ್ ಕೊಡಿಸುವ ಕೆಲಸವನ್ನು ಮಾರುತಿ ಮಾಡುತ್ತಿದ್ದ.
ನೆಲಮಂಗಲ ಶಾಸಕ ಶ್ರೀನಿವಾಸ್ ಹಾಗೂ ಆಪ್ತ ಮುಖಂಡರಿಗೆ ವಿಶೇಷ ದರ್ಶನ ಮಾಡಿಸುತ್ತೇವೆ, ರೂಂ ವ್ಯವಸ್ಥೆಯೂ ಇರಲಿದೆ ಎಂದು ಹೇಳಿ ಪಾಸ್ ಇಲ್ಲದೆ, ದರ್ಶನವನ್ನೂ ಮಾಡಿಸದೆ ಪರಾರಿಯಾಗಿದ್ದ. ಸತತ 11 ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆತನನ್ನು ಕೆಲಸದಿಂದ ತಗೆದಿದ್ದರು. ಇತನ ಮೇಲೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವಾರು ಠಾಣೆಗಳಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ IPC 1860 ರೀತ್ಯಾ 406, 417, 419, 420 ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಹಿನ್ನಲೆ ಆರೋಪಿ ಮಾರುತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.




