ನವದೆಹಲಿ: “ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ಗಳ ಮೇಲೆ ಗಮನ ಕೇಂದ್ರೀಕರಿಸಿದ್ದವು. ಆದರೆ, ನಾವು ಜನರ ನಂಬಿಕೆಯನ್ನು ಪುನಃಸ್ಥಾಪಿಸಿದ್ದೇವೆ. ಅನೇಕ ದೇಶಗಳಲ್ಲಿ ಪ್ರತಿ ಚುನಾವಣೆಗೂ ಸರ್ಕಾರಗಳು ಬದಲಾಗುತ್ತವೆ. ಆದರೆ ಭಾರತದ ಜನರು ಮೂರನೇ ಬಾರಿಗೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಹಿಂದಿನ ಸರ್ಕಾರಗಳು ಚುನಾವಣೆಗಳನ್ನು ಗೆಲ್ಲಲು ಮತ್ತು ವೋಟ್ ಬ್ಯಾಂಕ್ ರಾಜಕೀಯದ ಕಡೆ ಗಮನಹರಿಸಿದರೆ, ನಾವು ಸರ್ಕಾರದ ಮೇಲೆ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಇದೇ ವೇಳೆ ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಆ ಸಮಯದಲ್ಲಿ ಭಯೋತ್ಪಾದನೆಯು ಭಾರತದ ಜನರನ್ನು ಅಸುರಕ್ಷಿತರನ್ನಾಗಿಸುತ್ತಿತ್ತು. ಆದರೆ, ಭಯೋತ್ಪಾದಕರು ಈಗ ತಮ್ಮ ಮನೆಗಳಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಹೀಗಾಗಿ, ಈಗ ಸಮಯ ಬದಲಾಗಿದೆ ಎಂದು ಹೇಳಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರಕಾರಗಳು ವೋಟ್ ಬ್ಯಾಂಕ್ ರಾಜಕೀಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಿದ್ದರೆ, ಈಗಿನ ಸರ್ಕಾರವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ .ಭಾರತ ದೇಶವು ಈಗ 1.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್ಅಪ್ಗಳನ್ನು ಹೊಂದಿದೆ. ಯುವಕರು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.
ಇಂದು ಭಾರತವು ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ. ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಮೂಲಾಧಾರವಾಗಿಸಿದ್ದೇವೆ. ನಮ್ಮ ಸರ್ಕಾರವು ಜನರ, ಜನರಿಂದ ಮತ್ತು ಜನರಿಗಾಗಿ ಪ್ರಗತಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಸ್ವಾತಂತ್ರ್ಯಾ ನಂತರ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. ಜನರಿಗಾಗಿ ಹೆಚ್ಚು ಖರ್ಚು ಮಾಡುವುದು, ಜನರಿಗಾಗಿ ಹೆಚ್ಚು ಉಳಿಸುವುದು ನಮ್ಮ ಸರ್ಕಾರದ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ.