ಮೈಸೂರು : ಮುಡಾ ಹಗರಣ ಸಂಬಂಧ ಲೋಕಾಯುಕ್ತ ಸರ್ಚ್ ವಾರೆಂಟ್ ಮಾಹಿತಿ ಸೋರಿಕೆಗೆ 8 ಕೋಟಿ ರೂಪಾಯಿ ಡೀಲ್ ನಡೆದಿತ್ತು ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಡೀಲ್ ನಡೆದಿರುವ ಬಗ್ಗೆ ನನ್ನ ಬಳಿ ದಾಖಲೆ ಇದೆ. ಇವತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.ಸಂಬಂಧ ವಿಚಾರಣೆಗಾಗಿ ಇಂದು ಕಚೇರಿಗೆ ಬರಲು ಹೇಳಿದ್ದಾರೆ ಎಂದು ಅವರು ತಿಳಿಸಿದ್ದು, ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿದ್ದಾರೆ.
ಮೈಸೂರು ಮುಡಾ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲು ಲೋಕಾಯುಕ್ತ ವಾರೆಂಟ್ ಪಡೆದಿತ್ತು. ಆದರೆ, ನಂತರ ಸರ್ಚ್ ಮಾಡದೆ ಸರ್ಚ್ ವಾರೆಂಟ್ ವಾಪಸ್ಸು ಕೊಡಲಾಗಿತ್ತು. ಸರ್ಚ್ ವಾರೆಂಟ್ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ಮಾಲ್ತೇಶ್ರಿಂದ ಮಾಹಿತಿ ಸೋರಿಕೆಯಾಗಿತ್ತು. ಸಚಿವ ಬೈರತಿ ಸುರೇಶ್ ಹಿಂದಿನ ಆಯುಕ್ತಾದ ಜಿಟಿ ದಿನೇಶ್ ಕುಮಾರ್ ಹಾಗೂ ನಟೇಶ್ಗೆ ಮಾಹಿತಿ ನೀಡಿದ್ದರು. ಇದಕ್ಕಾಗಿ 8 ಕೋಟಿ ರೂಪಾಯಿ ಹಣದ ಡೀಲ್ ನಡೆದಿದ್ದ ದಾಖಲೆ ನನ್ನ ಬಳಿ ಇದೆ. ಆ ದಾಖಲೆಯನ್ನು ನೀಡುತ್ತೇನೆ. ಈಗಾಗಲೆ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿದ್ದೇನೆ ಎಂದು ಗಂಗರಾಜು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯಾವುದೇ ಮಾಹಿತಿ ಕೇಳಿದರೂ ನೀಡುವೆ. ಮುಡಾದಲ್ಲಿ ಸಿದ್ದರಾಮಯ್ಯ ಅವರದ್ದು 20 ರಿಂದ 25 ಕೋಟಿ ರೂ. ಅಕ್ರಮ. ಆದರೆ, ಒಟ್ಟಾರೆಯಾಗಿ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. 50:50 ಅನುಪಾತದಲ್ಲಿ ಬದಲಿ ಭೂಮಿಯನ್ನು ಖಾತೆ ಕಂದಾಯ ಸೆಟಲ್ಮೆಂಟ್ ಡೀಡ್ಗಳ ಮೂಲಕ ಕಿಕ್ ಬ್ಯಾಕ್ ಪಡೆಯಲಾಗಿದೆ. ಈ ತನಿಖೆಗಳು ಏನೇ ಇರಲಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಗಂಗರಾಜು ಅಭಿಪ್ರಾಯಪಟ್ಟಿದ್ದಾರೆ.