ಜಿಲ್ಲೆ

ಸಾಲಗಾರರ ಕಾಟಕ್ಕೆ ಹೆದರಿದ ಕುಟುಂಬ: ನಾಪತ್ತೆಯಾಗಿ 8 ದಿನ ಕಳೆದರೂ ಸುಳಿವೇ ಇಲ್ಲ!

ಮೈಸೂರು ; ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬ ನಾಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್​ಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಇಡೀ ಕುಟುಂಬ ನಾಪತ್ತೆಯಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್​​ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಕಳೆದ 8 ದಿನಗಳಿಂದ ಈ ಕುಟುಂಬ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ವಾಟ್ಸಾಪ್​ಗೆ ಸಂದೇಶ ರವಾನಿಸಿ 8 ದಿನಗಳಿಂದ ನಾಪತ್ತೆಯಾಗಿರುವ ಕುಟುಂಬವನ್ನು ಪತ್ತೆ ಹಚ್ಚುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್​ಗೆ, ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್ ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ.

ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ಮಹೇಶ್ ಮಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾರೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button