ಟಾಲಿವುಡ್ ನಟ ಮೋಹನ್ ಬಾಬು ಕುಟುಂಬದಲ್ಲಿ ಕಳೆದ ಕೆಲವು ದಿನಗಳಿಂದ ಕಿರಿಕ್ ಶುರುವಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ಮೋಹನ್ ಬಾಬು ಪುತ್ರರಾದ ಮಂಚು ಮನೋಜ್, ಮಂಚು ವಿಷ್ಣು ಕಿತ್ತಾಡಿಕೊಂಡಿದ್ದಾರೆ. ಅವರ ಕುಟುಂಬದ ಬಿರುಕು ಜಗಜ್ಜಾಹೀರಾಗಿದೆ. ಅಪ್ಪ-ಮಕ್ಕಳು ಪರಸ್ಪರ ಪೊಲೀಸ್ ದೂರು ನೀಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸುದ್ದಿ ಆಗಿದೆ. ಈ ಕುರಿತು ವರದಿ ಮಾಡಲು ತೆರಳಿದ್ದ ಟಿವಿ9 ವರದಿಗಾರರ ಮೇಲೆ ಮೋಹನ್ ಬಾಬು ಅವರು ಹಲ್ಲೆ ಮಾಡಿದ್ದಾರೆ. ಅವರ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಮಾಧ್ಯಮ ಪ್ರತಿನಿಧಿ ಮೇಲೆ ತೆಲುಗು ಹೀರೋ ಮೋಹನ್ ಬಾಬು ಹಲ್ಲೆ ನಡೆಸಿದ್ದಾರೆ. ಹೈದರಾಬಾದ್ನ ಮಂಚುಟೌನ್ನ ಜಲ್ಲಪಲ್ಲಿ ಬಳಿ ಗೂಂಡಾಗಿರಿ ಮಾಡಲಾಗಿದೆ. ಕೌಟುಂಬಿಕ ಕಲಹದ ಬಗ್ಗೆ ವರದಿಗೆ ತೆರಳಿದ್ದಾಗ ದುಂಡಾವರ್ತನೆ ತೋರಿದ್ದಾರೆ. ‘ಟಿವಿ9’ ವಾಹಿನಿಯ ಲೋಗೋ ಕಿತ್ತುಕೊಂಡು ವರದಿಗಾರನಿಗೆ ಮೋಹನ್ ಬಾಬು ಥಳಿಸಿದ್ದಾರೆ. ಮಾಧ್ಯಮ ಸಿಬ್ಬಂದಿಯೊಂದಿಗೆ ಅವರು ಅಸಭ್ಯ ವರ್ತನೆ ತೋರಿದ್ದಾರೆ.
Breaking!
Telugu actor mohan babu attacked on Tv9 news reporter. #MohanBabu
— Veena Jain (@DrJain21) December 10, 2024
ತಂದೆ-ಮಗನ ನಡುವೆ ಆಸ್ತಿ ವಿಚಾರದಲ್ಲಿ ಜಗಳ
ಮೋಹನ್ ಬಾಬು ಅವರು ಪುತ್ರ ಮನೋಜ್ ಮಂಚು ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಮನೋಜ್ ಮಂಚು ಅವರು ತಮ್ಮ ತಂದೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ. ಮೋಹನ್ ಬಾಬು ಅವರ ಪುತ್ರ ಹಾಗೂ ಸೊಸೆ ಮೋನಿಕಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೋಹನ್ ಬಾಬು ಒತ್ತಾಯಿಸಿದ್ದರು. ತನ್ನ ಮಗ ಮತ್ತು ಸೊಸೆಯಿಂದ ಬೆದರಿಕೆ ಇದೆ ಎಂದು ಬಣ್ಣಿಸಿರುವ ಮೋಹನ್ ತನಗೆ ಮತ್ತು ತನ್ನ ಆಸ್ತಿಗೆ ಪೊಲೀಸ್ ರಕ್ಷಣೆ ಕೋರಿದ್ದರು.
ಆಸ್ತಿಗಾಗಿ ಮನೋಜ್ ಹಾಗೂ ವಿಷ್ಣು ನಡುವೆ ತಿಕ್ಕಾಟ
ಆಸ್ತಿಗಾಗಿ ಮನೋಜ್ ಹಾಗೂ ವಿಷ್ಣು ನಡುವೆ ತಿಕ್ಕಾಟ ನಡೀತಿದೆ. ವಿಷ್ಣು ಪರ ಮೋಹನ್ ಬಾಬು ನಿಂತಿದ್ದಾರೆ. ಇತ್ತೀಚೆಗೆ ತಮ್ಮ ಆಪ್ತರ ಮೂಲದ ತಂದೆ ಮೋಹನ್ ಬಾಬು ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಮನೋಜ್ ಆರೋಪಿಸಿದ್ದರು.
ನಿನ್ನೆ ನಡೆದಿದೆ ಇನ್ನಷ್ಟು ಗಲಾಟೆ
ಜಲಪಲ್ಲಿಯಲ್ಲಿರುವ ಮೋಹನ್ ಬಾಬು ನಿವಾಸದಲ್ಲಿ ಮನೋಜ್ ಅವರ ಬೌನ್ಸರ್ ಗಳು ಹಾಗೂ ಮೋಹನ್ ಬಾಬು ರಕ್ಷಣೆಗೆ ಅವರ ಹಿರಿಯ ಪುತ್ರ ವಿಷ್ಣು ನೇಮಿಸಿದ್ದ ಬೌನ್ಸರ್ ಗಳ ನಡುವೆ ಘರ್ಷಣೆ ನಡೆದಿದೆ. ಮೋಹನ್ಬಾಬು, ಮನೋಜ್ ಮತ್ತು ಮೌನಿಕಾಳನ್ನು ಮನೆಗೆ ಪ್ರವೇಶಿಸಲು ಬಿಡದಿದ್ದಾಗ, ಮನೋಜ್ ಗೇಟು ಮುರಿದು ಒಳಬರಲು ಯತ್ನಿಸಿದ್ದು, ಸಂಘರ್ಷ ಇನ್ನಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ.
ಜಲಪಲ್ಲಿಯಲ್ಲಿರುವ ಮೋಹನ್ ಬಾಬು ನಿವಾಸದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ತೆಲಂಗಾಣ ಎಡಿಜಿಪಿ ಅವರನ್ನು ಭೇಟಿಯಾದ ನಂತರ ಮನೋಜ್ ದಂಪತಿ ನಿವಾಸಕ್ಕೆ ಆಗಮಿಸಿದಾಗ ಭದ್ರತಾ ಸಿಬ್ಬಂದಿ ತಡೆದರು. ಅವರು ಗೇಟ್ಗಳನ್ನು ಒಡೆದು ಒಳಗೆ ಪ್ರವೇಶಿಸಿದರು. ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಗಳು ಮನೆಯಲ್ಲೇ ಇದ್ದಾಳೆ ಎಂದು ಮನೋಜ್ ಆತಂಕ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ಗೇಟ್ ತೆರೆಯದ ಕಾರಣ ಅವರು ಸ್ವಲ್ಪ ಹೊತ್ತು ಕಾರಿನಲ್ಲಿಯೇ ಇದ್ದರು. ನಂತರ ಅವರು ಗೇಟ್ಗಳನ್ನು ತಳ್ಳಿದರು ಮತ್ತು ಬಲವಂತವಾಗಿ ಒಳಗೆ ಬಂದರು.