#Exclusive NewsTop Newsರಾಜಕೀಯವಿಶೇಷಸುದ್ದಿ

4 ತಿಂಗಳ ಹಿಂದೆ ಕಳೆದು ಹೋಗಿದ್ದ ಮಹಿಳೆ ಶವವಾಗಿ ಪತ್ತೆ : ಜಿಮ್ ಟ್ರೈನರ್‌ನಿಂದ ಹತ್ಯೆ !

ಕಾನ್ಪುರ: ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಶವವಾಗಿ ಪತ್ತೆಯಾಗಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆ ಸಮೀಪ ಭಾನುವಾರದಂದು ಶವ  ಪತ್ತೆಯಾಗಿದೆ.ಸರ್ಕಾರಿ ಅಧಿಕಾರಿಗಳಿಗೆ ಹಂಚಿಕೆ ಮಾಡಲಾದ ಬಂಗಲೆಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಉದ್ಯಮಿಯ ಪತ್ನಿ ಶವವನ್ನು ಹೂತು ಹಾಕಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಆರೋಪಿಯನ್ನು ಗ್ರೀನ್ ಪಾರ್ಕ್ ಪ್ರದೇಶದ ಜಿಮ್ ಟ್ರೈನರ್ ವಿಶಾಲ್ ಸೋನಿ ಎಂದು ಗುರುತಿಸಲಾಗಿದೆ.ಕಾನ್ಪುರದ ರಾಯಪೂರ್ವ ಪ್ರದೇಶದ ನಿವಾಸಿಯಾಗಿರುವ ಸೋನಿ ನೀಡಿದ ಮಾಹಿತಿ ಆಧಾರದಲ್ಲಿ ನೆಲವನ್ನು ಅಗೆದಾಗ ಮಹಿಳೆಯ ಶವ ಪತ್ತೆಯಾಗಿದೆ.ಜೂನ್ 24ರಂದು 32 ವರ್ಷದ ಏಕ್ತಾ ಗುಪ್ತಾ ನಾಪತ್ತೆಯಾಗಿದ್ದರು. ತನಿಖೆ ವೇಳೆ, ಆಕೆ ಸಾವಿಗೀಡಾಗಿರುವುದು ಗೊತ್ತಾಗಿತ್ತು. ಮಹಿಳೆಯ ಪತಿ ರಾಹುಲ್ ಗುಪ್ತಾ ನೀಡಿದ ದೂರಿನ ಅನ್ವಯ ವಿಶಾಲ್ ಸೋನಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಮದುವೆ ವಿಚಾರಕ್ಕೆ ಕಿತ್ತಾಟ

ತನ್ನ ಹಾಗೂ ಏಕ್ತಾ ನಡುವೆ ಸಂಬಂಧ ಇತ್ತು. ತನಗೆ ಬೇರೊಬ್ಬ ಮಹಿಳೆ ಜತೆ ನಿಶ್ಚಿತಾರ್ಥ ನಡೆದಿತ್ತು. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಆರೋಪಿ ತಿಳಿಸಿದ್ದಾನೆ.ಜೂನ್ 24ರಂದು ಜಿಮ್‌ಗೆ ಬಂದಿದ್ದ ಏಕ್ತಾ, ಆತನ ಮದುವೆ ವಿಚಾರಕ್ಕೆ ಜಗಳ ಕಾದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿತ್ತು. ಆಗ ಕೋಪಗೊಂಡ ಸೋನಿ, ಆಕೆಯ ಮುಖಕ್ಕೆ ಗುದ್ದಿದ್ದ. ಬಲವಾಗಿ ಏಟು ತಿಂದ ಏಕ್ತಾ, ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಅಕೆಯನ್ನು ಕೊಲೆ ಮಾಡಿದ ಆರೋಪಿ, ಶವವನ್ನು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದ ಕ್ಲಬ್ ಬಳಿಗೆ ಕೊಂಡೊಯ್ದು ಅಲ್ಲಿ ಹೂತು ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೃಶ್ಯಂ ಸಿನಿಮಾ ಸ್ಫೂರ್ತಿ

‘ದೃಶ್ಯಂ’ ಸಿನಿಮಾ ಪ್ರೇರಣೆಯಿಂದ ಕಾನ್ಪುರ ಡಿಎಂ ನಿವಾಸದ ಬಳಿ ಶವ ಹೂಳುವ ಐಡಿಯಾ ಪಡೆದಿದ್ದಾಗಿ ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ವಿವಿಐಪಿಗಳು ವಾಸಿಸುವ ಇಂತಹ ಪ್ರದೇಶದಲ್ಲಿ ಯಾವುದೇ ಕೊಲೆಯಂತಹ ಘಟನೆ ಬಗ್ಗೆ ಪೊಲೀಸರು ಅನುಮಾನ ಪಡುವುದಿಲ್ಲ ಎನ್ನುವುದು ಆತನ ಲೆಕ್ಕಾಚಾರವಾಗಿತ್ತು.ವಿಶಾಲ್ ಸೋನಿಯ ಮದುವೆ ನಿಶ್ಚಯವಾಗಿದ್ದು ಮಹಿಳೆಗೆ ಬೇಸರ ಉಂಟುಮಾಡಿತ್ತು ಎನ್ನಲಾಗಿದೆ. ಅಪರಾಧ ನಡೆದ ದಿನ, ಅವರು 20 ದಿನಗಳ ನಂತರ ಜಿಮ್‌ಗೆ ಬಂದಿದ್ದರು. ಇಬ್ಬರೂ ಕಾರ್‌ನಲ್ಲಿ ಕುಳಿತು ಮಾತುಕತೆ ನಡೆಸಿದ್ದರು. ಆಗ ವಾಗ್ವಾದ ತೀವ್ರಗೊಂಡಾಗ ಆರೋಪಿಯು ಸಂತ್ರಸ್ತೆ ಮುಖಕ್ಕೆ ಗುದ್ದಿ, ಬಳಿಕ ಕೊಲೆ ಮಾಡಿದ್ದ” ಎಂದು ಡಿಸಿಪಿ (ಉತ್ತರ ಕಾನ್ಪುರ) ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆರೋಪಿಯು ಮೊಬೈಲ್ ಫೋನ್ ಬಳಸದ ಕಾರಣ ಆತನನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು. ಪುಣೆ, ಆಗ್ರಾ ಮತ್ತು ಪಂಜಾಬ್‌ಗೆ ತನಿಖೆಗಾಗಿ ತಂಡಗಳನ್ನು ಕಳುಹಿಸಲಾಗಿತ್ತು.

ತನ್ನ ಪತ್ನಿಗೆ ಜಿಮ್ ಟ್ರೈನರ್ ಜತೆ ಸಂಬಂಧ ಇತ್ತು ಎಂಬುದನ್ನು ಮಹಿಳೆಯ ಗಂಡ ರಾಹುಲ್ ಗುಪ್ತಾ ಅಲ್ಲಗಳೆದಿದ್ದಾರೆ. “ಅವರ ನಡುವೆ ಯಾವುದೇ ಆಪ್ತ ಸಂಬಂಧ ಇರಲಿಲ್ಲ. ಇದು ಅಪಹರಣ ಪ್ರಕರಣ. ನಾವು ಅಪಹರಣದ ಕುರಿತು ದೂರು ನೀಡಿದ್ದೆವು” ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button