ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ರಾಕ್ಷಸಿ ಕೃತ್ಯ ಮೆರೆದಿದ್ದಾರೆ. ಭಯೋತ್ಪಾದಕರ ದಾಳಿ ವಿಷಯ ಗೊತ್ತಾಗುತ್ತಿದ್ದಂತೆ, ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪಹಲ್ಗಾಮ್ಗೆ ದೌಡಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ, ಮೊದಲೇ ನಿಗದಿಯಾಗಿದ್ದ ಧಾರವಾಡದ ಕಾರ್ಯಕ್ರಮವನ್ನೂ ರದ್ದುಗೊಳಿಸಿ, ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ರಾತ್ರೋರಾತ್ರಿ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ರು.
ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ IPS ಅಧಿಕಾರಿ ಆರ್. ಚೇತನ್ ನೇತೃತ್ವದ ಅಧಿಕಾರಿಗಳು, ಸಿಬ್ಬಂದಿ ತಂಡವನ್ನು ಕಳುಹಿಸಿದೆ. ಜೊತೆಗೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಳೆದ ಮಂಗಳವಾರ ರಾತ್ರಿ ಕಳುಹಿಸಿದೆ.
ಕಾಶ್ಮೀರದಲ್ಲಿ ಉಗ್ರರ ಅಟಹಾಸಕ್ಕೆ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್, ರಾಣೆಬೆನ್ನೂರು, ಬೆಂಗಳೂರು ನಿವಾಸಿಗಳು ಸೇರಿದಂತೆ ಹಲವರು ಬಲಿಯಾಗಿದ್ದಾರೆ.
ಪಹಲ್ಗಾಮ್ಗೆ ಸಂತೋಷ್ ಲಾಡ್ ಭೇಟಿ ಕೊಡುತ್ತಿದ್ದಂತೆ, ಅಲ್ಲಿನ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಬಳಿಕ ಮೃತಪಟ್ಟವರ ಗುರುತು ಪತ್ತೆ ಮಾಡಲು ನೆರವಾಗಿದ್ದಾರೆ.
ಮೃತದೇಹಗಳನ್ನು ಇರಿಸಿದ್ದ ಪೆಟ್ಟಿಗೆಗಳ ಮೇಲೆ ಮೃತಪಟ್ಟವರ ಹೆಸರು, ವಿಳಾಸ, ಫೋನ್ ನಂಬರ್ ಬರೆಯಲಾಗಿತ್ತು. ಮೃತಪಟ್ಟ ಕನ್ನಡಿಗರ ಸಂಬಂಧಿಕರಿಗೆ ಸ್ವತಃ ಫೋನ್ ಮಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಳಿಕ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ, ಉಗ್ರರ ದಾಳಿ, ಪ್ರವಾಸಿಗರ ರಕ್ಷಣೆ, ಸುರಕ್ಷತೆ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತುಕತೆ ನಡೆಸಿದ್ರು.
ಪಹಲ್ಗಾಮ್ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂತೋಷ್ ಲಾಡ್ ಮೂಲಕ ದೂರವಾಣಿಯಲ್ಲಿ ಮಾತಾಡಿದರು. ಇದರಿಂದ ಕನ್ನಡಿಗ ಪ್ರವಾಸಿಗರಲ್ಲಿ ಒಂದಿಷ್ಟು ಧೈರ್ಯ ಮೂಡಿಸಿದೆ.
ಮುಖ್ಯಮಂತ್ರಿಗಳ ನೀಲಿಗಣ್ಣಿನ ಹುಡುಗನಾಗಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಜ್ಯದ ಜನರು ಸಂಕಷ್ಟದಲ್ಲಿರುವಾಗಲೆಲ್ಲಾ ಹೊತ್ತು ಗೊತ್ತು ನೋಡದೇ ಕಾರ್ಯಾಚರಣೆಗೆ ಧುಮುಕುತ್ತಾರೆ. ಈ ಹಿಂದೆ ಪ್ರವಾಹ, ಭೂಕಂಪದಂತಹ ಅವಘಡಗಳು ಆಗಿದ್ದ ಸಂದರ್ಭದಲ್ಲೂ ಕಾರ್ಮಿಕ ಸಚಿವರಿಗೆ ಸಿಎಂ ಜವಾಬ್ದಾರಿ ಹೊರೆಸಿದ್ದರು.