ರಾಜ್ಯದ ಕಡುಭ್ರಷ್ಟ ಅಧಿಕಾರಿ ಟೌನ್ ಪ್ಲ್ಯಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಲಾಗಿದೆ. ಭೂಮಿ ಕನ್ವರ್ಷನ್ ಮಾಡಿಕೊಡಲು ಲಂಚಕ್ಕಾಗಿ ಪೀಡಿಸುತ್ತಿದ್ದ ತಿಪ್ಪೇಸ್ವಾಮಿ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕ್ವರ್ಷನ್ ಗೆ ಎಕರೆಗಿಷ್ಟು ಎಂದು ದರ ನಿಗದಿ ಮಾಡಿದ್ದ ತಿಪ್ಪೇಸ್ವಾಮಿ ಹಲವು ಪ್ರಕರಣಗಳಲ್ಲಿ ಎಕರೆಗಟ್ಟಲೆ ಜಮೀನನನ್ಜು ಲಂಚವಾಗಿ ಕೇಳಿದ್ದ ಬಗ್ಗೆ ದೂರುಗಳು ದಾಖಲಾಗಿದ್ದವು.
ಸೈಟ್ ಹಾಗೂ ಭೂಮಿಯನ್ನೇ ಲಂಚವಾಗಿ ಕೇಳಿ ಇಡೀ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ತಿಪ್ಪೇಸ್ವಾಮಿ ಗುರಿಯಾಗಿದ್ದರು. ರಾಜ್ಯವ್ಯಾಪಿ ಭೂಪರಿವರ್ತನೆಗಾಗಿ ಬರುವ ಕಡತಗಳು ತಿಪ್ಪೇಸ್ವಾಮಿಯ ಲಂಚದಾಹಕ್ಕೆ ತಿಂಗಳುಗಟ್ಟಲೆ ಕೊಳೆಯುತ್ತಾ ಬಿದ್ದಿರುತ್ತಿದ್ದವು. ಇದಕ್ಕೆ ಬೇಸತ್ತು ಹಲವರು ಲೋಕಾಯುಕ್ತ ಕಚೇರಿಯ ಬಾಗಿಲು ಬಡೆದಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತಿಪ್ಪೇಸ್ವಾಮಿ ಹಾಗೂ ಅವರ ಟೀಮ್ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದ್ದರು.
ಇಂದು ಬೆಳಗ್ಗೆ ನಡೆದ ದಾಳಿಯಲ್ಲಿ ಬೆಂಗಳೂರಿನ ಗಿರಿನಗರ 4ನೇ ಹಂತದಲ್ಲಿರುವ ತಿಪ್ಪೇಸ್ವಾಮಿ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳ ದಾಳಿ ವೇಳೆ ಲಂಚಾವತಾರಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ತಿಪ್ಪೇಸ್ವಾಮಿ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಗೋಲ್ಡ್ ಬಿಸ್ಕೆಟ್ ಗಳು ಪತ್ತೆಯಾಗಿದ್ದು, ಅಧಿಕಾರಿಗಳು ತಿಪ್ಪೇಸ್ವಾಮಿ ಮನೆಗೆ ಅಕ್ಕಸಾಲಿಗರನ್ನ ಕರೆಸಿ ಮೌಲ್ಯಮಾಪನ ಮಾಡಿಸುತ್ತಿದ್ದಾರೆ.