ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಡಿಕೆ ಶಿವಕುಮಾರ್ಗೆ ಸಿಸಿಎಲ್ ಪಂದ್ಯಕ್ಕೆ ಆಹ್ವಾನ ನೀಡಲು ಆಗಮಿಸಿದ್ದ ನಟ ಸುದೀಪ್ ಅವರು ಪಂದ್ಯಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಇದೇ ಫೆ.8ರಿಂದ ಸಿಸಿಎಲ್ ಆರಂಭ ಆಗಲಿದೆ. ಇದರ ಉದ್ಘಾಟನೆಗೆ ಡಿಕೆಶಿ ಅವರಿಗೆ ಸುದೀಪ್ ಆಹ್ವಾನ ನೀಡಿದ್ದಾರೆ. ಹೀಗಾಗಿ, ಅವರು ಡಿಕೆಶಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸುದೀಪ್ಗೆ ಡೈರೆಕ್ಟರ್ ಅನೂಪ್ ಭಂಡಾರಿ ಸಾಥ್ ನೀಡಿದ್ದಾರೆ. ಫೆ.8ರಂದು ಕರ್ನಾಟಕ ಬುಲ್ಡೋಜರ್ ತಂಡದವರು ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
ಅಂದಹಾಗೆ, ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಮಾತನಾಡಿ, ಸಿಸಿಎಲ್ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ ಒಟ್ಟಿಗೆ ಶುರುವಾದ ಜರ್ನಿ ಇದು. ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಮುಂಬೈ ಮೇಲೆ ಮೊದಲ ಮ್ಯಾಚ್ ಆಡಿದ್ದೇವು. ಅದ್ಭುತ ವಾತಾವರಣ ಆ ದಿನ ಇತ್ತು. ನಾವೆಲ್ಲಾ ಚಿಕ್ಕ ಚಿಕ್ಕ ಗ್ರೌಂಡ್ನಲ್ಲಿ ಆಟವಾಡುತ್ತಿದ್ದರು. ಅವತ್ತಿಗೆ ಗ್ರೌಂಡ್ ಫುಲ್ ಆಗುತ್ತದೆ. ಇಷ್ಟು ಜನಗಳ ಮಧ್ಯೆ ಆಡುವುದು. ಭಯ ಎಂದರೇನು ಅನ್ನುವುದು ಅವತ್ತು ಗೊತ್ತಾಯ್ತು. ನಮಗೆ ಅದು ಕೊಟ್ಟ ಅದ್ಭುತ ಗಿಫ್ಟ್. ಚಿತ್ರರಂಗದ ಬೇರೆ ಬೇರೆ ಭಾಷೆಗಳ ಜೊತೆ ನಮಗೆ ಒಡನಾಟ ಇರಲಿಲ್ಲ. ಸೇತುವೆ ಇರಲಿಲ್ಲ. ಆದರೆ ಸಿಸಿಎಲ್ನಿಂದ ಸಂಪರ್ಕವಾಯಿತು ಎಂದು ಮಾತನಾಡಿದ್ದರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದು ಭಾರತೀಯ ಚಿತ್ರರಂಗದ ವಿವಿಧ ಚಲನಚಿತ್ರೋದ್ಯಮಗಳ ನಟರ ತಂಡಗಳನ್ನು ಒಳಗೊಂಡ ಟೂರ್ನಿಯಾಗಿದೆ. 2025ರ ಟೂರ್ನಿಯಲ್ಲಿ ಒಟ್ಟು 7 ಟೀಮ್ಗಳು ಭಾಗವಹಿಸಲಿವೆ. ಇದರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಕೂಡ ಒಂದಾಗಿದೆ. ಇದರ ಜೊತೆಗೆ ಭೋಜ್ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್ ತಂಡಗಳು ಇವೆ.