ಮುಂಬೈ: ರಕ್ಷಣಾ ಉತ್ಪನ್ನಗಳನ್ನ ತಯಾರಿಸುವ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸಚಿವ ನಿತೀಶ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ನಾಗ್ಪುರ ಸಮೀಪದಲ್ಲಿರುವ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ 10:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಫೋಟದ ಸಮಯದಲ್ಲಿ ಛಾವಣಿ ಕುಸಿದಿದ್ದು ಅದರ ಅಡಿಯಲ್ಲಿ 12 ಮಂದಿ ಸಿಲುಕಿಕೊಂಡಿದ್ದರು. ಈ 12 ಮಂದಿ ಪೈಕಿ ಇಬ್ಬರನ್ನು ಮಾತ್ರ ರಕ್ಷಿಸಲಾಗಿದೆ. ಉಳಿದವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುಮಾರು 5 ಕಿಮೀ ವರೆಗೂ ಶಬ್ಧ ಕೇಳಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿರುವುದು ವಿಡಿಯೋ, ಫೋಟೋಗಳಲ್ಲಿ ಸೆರೆಯಾಗಿದೆ.