ಚಿಕ್ಕಮಗಳೂರು: ಒಂದೇ ವಾರದಲ್ಲಿ ಚಿಕ್ಕಮಗಳೂರಿನ ಇಬ್ಬರಿಗೆ ಮಂಗನ ಕಾಯಿಲೆ (KFD) ಪತ್ತೆಯಾಗಿದ್ದು, ಮಲೆನಾಡು ಭಾಗದ ಜನರು ಆತಂಕಕ್ಕೀಡಾಗಿದ್ದಾರೆ.
ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಮೊಟ್ಟೆ ಇಡುವ ಉಣ್ಣೆ ಜನವರಿ ವೇಳೆಗೆ ಮರಿಯಾಗಿ ಹರಡುತ್ತವೆ. ಬೇಸಿಗೆ ತಿಂಗಳಾದ ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಮತ್ತಷ್ಟು ವ್ಯಾಪಕ ಹರಡಲಿದೆ. ಮಳೆಗಾಲದಲ್ಲಿ ಈ ಉಣ್ಣೆ ಇರುವುದಿಲ್ಲ. ಈ 2024ರಲ್ಲಿ ಆಗಿಂದಾಗ ವರ್ಷಪೂರ್ತಿ ಮಳೆ ಸುರಿದಿದ್ದರೂ ಸಹ, ಈ ವರ್ಷ ಆರಂಭದಲ್ಲಿ ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್ಡಿ ಪತ್ತೆಯಾಗಿದೆ. ಇದರಿಂದ ಕಾಡಂಚಿನ ಕುಗ್ರಾಮಗಳಲ್ಲಿ ಆತಂಕ ಎದುರಾಗಿದೆ.
ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಮೇಲ್ಪಾಲ್ ಸಮೀಪದ ಕರ್ಕೇಶ್ವರ ಗ್ರಾಮದ 46 ವರ್ಷದ ಓರ್ವ ವ್ಯಕ್ತಿ ಹಾಗೂ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪದ ಹಳ್ಳಿಯ 25 ವರ್ಷದ ಯುವಕನಲ್ಲಿ ಕೆಎಫ್ಡಿ ಕಾಣಿಸಿಕೊಂಡಿದೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋರ್ವ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರಿಗೂ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಾಗಿ ಕೆಎಫ್ಡಿ ಕಾಣಿಸಿಕೊಳ್ಳಲಿದೆ. ಇದು ಮಾರಣಾಂತಿಕ ವೈರಸ್ ಅಲ್ಲದಿದ್ದರೂ, ಆರೋಗ್ಯದ ಬಗ್ಗೆ ನಿಗಾ ವಹಿಸದಿದ್ದರೆ ತೀವ್ರತನವಾದ ಅನಾರೋಗ್ಯ ಎದುರಿಸುವ ಸಂದರ್ಭ ಬರಬಹುದು ಅಂತಾರೆ ತಜ್ಞರು.