ಮಂಗಳೂರು : ಸೈಬರ್ ವಂಚಕರಿಗೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರಿನ ಸೆನ್ ಕ್ರೈಂ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣಾತಲ ವಾಸುದೇವ ರೆಡ್ಡಿ ಬಂಧಿತ ಆರೋಪಿ. ಆರೋಪಿ ಸೈಬರ್ ವಂಚಕರಿಗೆ ಭಾರತದಿಂದ ವಿವಿಧ ಕಂಪನಿಗಳ 500ಕ್ಕೂ ಹೆಚ್ಚು ಸಿಮ್ಗಳನ್ನು ಪೂರೈಕೆ ಮಾಡಿದ್ದನು.
ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್ ಮೂಲಕ ನಕಲಿ ಲಿಂಕ್ ಕಳುಹಿಸಿ ಅದರ ಮೂಲಕ ಲಕ್ಷಾಂತರ ರೂ. ದೋಚಿದ್ದನು. ಹೀಗೆ, ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೈಬರ್ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅರ್ಗವಾಲ್ ಮಾತನಾಡಿ, ಮೂಡಬಿದಿರೆ ನಿವಾಸಿಯೊಬ್ಬರು ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಹಣ ವರ್ಗಾವಣೆಯಾದ ಖಾತೆಯನ್ನು ಫ್ರೀಝ್ ಮಾಡಿದ್ದೇವು. 9,50,000 ಹಣವನ್ನು ನಾವು ಪ್ರೀಝ್ ಮಾಡಿದ್ದೇವೆ ಎಂದು ಹೇಳಿದರು.
ಕೇರಳ ಮತ್ತು ಗುಜರಾತ್ ಮೂಲದ ಎರಡು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಟೆಕ್ನಿಕಲ್ ವಿಚಾರಣೆ ಸಂದರ್ಭದಲ್ಲಿ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಗೊತ್ತಾಯಿತು. ವಿಶಾಖಪಟ್ಟಣ ಮತ್ತು ಗೋಧಾವರಿ ಪ್ರದೇಶದಿಂದ ಸಿಮ್ ಕಾರ್ಡ್ ನೀಡಿರುವುದು ತಿಳಿಯಿತು. ನಮ್ಮ ಒಂದು ತಂಡ ಆಂಧ್ರಪ್ರದೇಶದ ಗೋಧಾವರಿಗೆ ತೆರಳಿ ಸತ್ಯನಾರಾಯಣ ರಾಜು ಎಂಬಾತನನ್ನು ಬಂಧಿಸಿದೆ. ಆತನಿಂದ 300ಕ್ಕೂ ಹೆಚ್ಚು ಸಿಮ್ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.


