ಚಿಕ್ಕಮಗಳೂರು:ಹಾಜರಾತಿ ಕೊರತೆ ಸರಿಪಡಿಸಿ, ಪರೀಕ್ಷೆ ಬರೆಯಲು ಅನುವು ಮಾಡಿಕೊಡುವ ವಿಷಯಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಯಿಂದ ಹಣ ಪಡೆಯುವ ವೇಳೆ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಹಾಗೂ ಎಫ್ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೀರೂರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಕೆ.ಪ್ರವೀಣ್ ಕುಮಾರ್ ಮತ್ತು ಎಫ್ಡಿಎ ಸದಾಶಿವಯ್ಯ ಬಂಧಿತ ಆರೋಪಿಗಳು.ಅಂತಿಮ ವರ್ಷದ ಬಿಎಸ್ಸಿ ಪರೀಕ್ಷೆ ಬರೆಯಲು ಹಾಜರಾತಿ ಕೊರತೆ ಇರುವ ಬಗ್ಗೆ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ ಗಮನಕ್ಕೆ ತಂದಿದ್ದ ಹಾಜರಾತಿ ಕೊರತೆ ಸರಿದೂಗಿಸುವ ಸಲುವಾಗಿ ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ 10 ಸಾವಿರ ರೂ.ಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಪ್ರಾಂಶುಪಾಲ ಎಂ.ಕೆ.ಪ್ರವೀಣ್ ಕುಮಾರ್ 5 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿದ್ಯಾರ್ಥಿ ಅತಿಥಿ ಉಪನ್ಯಾಸಕರೊಬ್ಬರ ಗಮನಕ್ಕೆ ತಂದಿದ್ದು, ಅವರು ಲೋಕಾಯುಕ್ತ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಬುಧವಾರ ಪ್ರಾಂಶುಪಾಲರ ಕಚೇರಿಯಲ್ಲಿ ಹಣ ನೀಡುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಪ್ರಾಂಶುಪಾಲ ಎಂ.ಕೆ.ಪ್ರವೀಣ್ ಕುಮಾರ್, ಎಫ್ಡಿಎ ಸದಾಶಿವಯ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.