ರಾಜ್ಯಸುದ್ದಿ

ಶೋಭಾಗೆ ಟಿಕೆಟ್: ಬಿಎಸ್ ವೈ ಬೆಂಬಲ-ವಿ-ರಾಘಿಗಳ ಅಡ್ಡಗಾಲು

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಲೋಕಾ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ಸಿಟಿ ರವಿ ಬೆಂಬಲಿಗರು ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಪ್ರಮೋದ್ ಮಧ್ವರಾಜ್ ಅಭಿಮಾನಿಗಳು ಟಿಕೆಟ್ ಗಾಗಿ ಗುದ್ದಾಡುತ್ತಿದ್ದಾರೆ.. ಇನ್ನು ಇವರ ನಡುವೆಯೇ ಜಯಪ್ರಕಾಶ್ ಹೆಗ್ಡೆ ಕೂಡ ನಾನು ಆಕಾಂಕ್ಷಿ ಅಂತ ಓಡಾಡುತ್ತಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಕೂತುಹಲ ಹೆಚ್ಚಾಗುತ್ತಿದೆ.

ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಶೋಭಾ ಕರಂದ್ಲಾಜೆ ಪಾಲಾಗೋದು ಬಹುತೇಕ ಖಚಿತವಾಗಿದೆ. ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಉಡುಪಿ ಚಿಕ್ಕಮಗಳೂರು ಬಿಜೆಪಿಯೊಳಗೆ ಆಂತರಿಕ ಕಲಹಗಳು ಶುರುವಾಗಿವೆ. ಇನ್ನು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದ್ದರೆ, ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ.

ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಶೋಭಕ್ಕನ ಬೆನ್ನ ಹಿಂದೆ ಸ್ವತಃ ಯಡಿಯೂರಪ್ಪನವರೇ ಇರ್ತಾರೆ ಅನ್ನೋದು ಗುಟ್ಟೇನಲ್ಲ. ಆದ್ರೆ, ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿಸೋ ಶತಪ್ರಯತ್ನಗಳು ಬಿಜೆಪಿಯಲ್ಲೇ ನಡೆಯುತ್ತಿವೆ. ಅದ್ರಲ್ಲೂ ಬಿವೈ ವಿಜಯೇಂದ್ರ ಹಾಗೂ ಬಿವೈ ರಾಘವೇಂದ್ರ ಇಬ್ಬರಿಗೂ ಕೂಡ ಶೋಭಾ ಕರಂದ್ಲಾಜೆ ಹೆಸರು ಕೇಳಿದ್ರೆ ಆಗಿಬರೋದಿಲ್ಲ ಅನ್ನೋದು ಕೂಡ ಗುಟ್ಟೇನಲ್ಲ. ಸುಳ್ಯದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಶೋಭಾ, ಯಡಿಯೂರಪ್ಪರ ಕೃಪಾರ್ಶಿವಾದ ಸಿಕ್ಕಿದ ಬಳಿಕ ಒಂದೊಂದೆ ಹಂತ ಬೆಳೆದವರು. ಶಾಸಕಿಯಾಗಿ, ರಾಜ್ಯ ಸಚಿವೆಯಾಗಿ, ಕೇಂದ್ರದ ಸಚಿವೆಯಾಗಿ ರಾಜಕೀಯದಲ್ಲಿ ಬೆಳೆಯಲು ಯಡಿಯೂರಪ್ಪರೇ ಕಾರಣ ಅನ್ನೋದು ವಾಸ್ತವ..

ಇದೇ ಶೋಭಾ ಕರಂದ್ಲಾಜೆಯಿಂದಾಗಿ ಕುಟುಂಬದಲ್ಲಿ ಬಿರುಕು ಬಂದಿದ್ದು, ಯಡಿಯೂರಪ್ಪನವರ ಮನೆಯೊಂದು ಮೂರು ಬಾಗಿಲಾಗಿದ್ದು, ಅನ್ನೋ ಸಿಟ್ಟು, ಯಡಿಯೂರಪ್ಪನವರ ಮಕ್ಕಳಲ್ಲಿದೆ. ಹೀಗಾಗಿ ಶೋಭಾ ಕರಂದ್ಲಾಜೆಯನ್ನ ರಾಜಕೀಯವಾಗಿ ಮುಗಿಸೋಕೆ ಸ್ವತಃ `ವಿ-ರಾಘಿ`ಗಳು ಯತ್ನಿಸುತ್ತಲೇ ಇದ್ದಾರೆ. ಆದ್ರೆ, ಯಡಿಯೂರಪ್ಪ ಮಾತ್ರ ಯಾರು ಏನೇ ಮಾತಾಡಿಕೊಂಡ್ರು ಶೋಭಾ ಕರಂದ್ಲಾಜೆಯನ್ನ ಸೈಡ್ ಲೈನ್ ಮಾಡೋಕೆ ತಯಾರಿಲ್ಲ..ಹೀಗಾಗಿ ಇದೀಗ ಲೋಕಾ ಟಿಕೆಟ್ ಫೈನಲ್ ಮಾಡಿಸಿಕೊಂಡು ಬರೋಕೆ ದೆಹಲಿಗೆ ಹೊರಟಿರುವ ಯಡಿಯೂರಪ್ಪ ಬಾಯಿಂದ ಬರುವ ಮೊದಲ ಹೆಸರೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಯದ್ದು.

2ನೇ ಬಾರಿ ಸಂಸದೆಯಾಗಿ, ಕೇಂದ್ರ ಮಂತ್ರಿಯೂ ಆಗಿರುವ ಶೋಭಾ, ತಮ್ಮ ಇಲಾಖೆಯ ಕೆಲಸಗಳಲ್ಲಿ ಡೆಲ್ಲಿಯಲ್ಲಿಯೇ ವ್ಯಸ್ತಾವ್ಯ ಹೂಡಿ ಉಡುಪಿ, ಚಿಕ್ಕಮಗಳೂರು ಕಡೆ ಬಂದದ್ದು, ಕಾರ್ಯಕರ್ತರನ್ನು ಭೇಟಿಯಾದದ್ದು ಕಮ್ಮಿ.. ಆದರೂ, ಈ ಬಾರಿಯೂ ತನಗೇ ಟಿಕೇಟ್ ಎಂಬ ದೈರ್ಯದಿಂದ ಇದ್ದಾರೆ. ಈ ಧೈರ್ಯದ ಹಿಂದೆ ಇರೋದು ಯಡಿಯೂರಪ್ಪನವರೇ.. ಇನ್ನು ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿಸೋಕೆ, ಅಂತಲೇ ಬಿವೈವೈ, ಬಿವೈಆರ್, ಸಿಟಿ ರವಿ, ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್.. ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರದ್ದು ಬಹಿರಂಗ ಹೋರಾಟ ಮತ್ತೆ ಕೆಲವರದ್ದು, ತೆರೆಮರೆ ಕಸರತ್ತು..ಅಕ್ಕಿ ಮೇಲೆ ಪ್ರೀತಿ ನೆಂಟರ ಮೇಲೆ ಇಷ್ಟ ಎಂಬಂತಾಗಿದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ. ಏನಾಗುತ್ತದೋ ಕಾದು ನೋಡಬೇಕು.

Comments (0)

Your email address will not be published. Required fields are marked *

Back to top button