ಕೆರೆಗೋಡು ಹನುಮ ಧ್ವಜ ವಿವಾದ ಮಂಡ್ಯ ನಗರ ಬಂದ್ ವಾಪಸ್

ಮಂಡ್ಯ: ಲೋಕ ಸಭಾ ಚುನಾವಣೆ ಹೊತ್ತಿನಲ್ಲಿ ಹೊತ್ತಿಕೊಂಡ ಕೆರೆಗೋಡು ಹನುಮ ಧ್ವಜ ತೆರವು ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಬಿಜೆಪಿ ಮನೆ ಮನೆಗೆ ಹನುಮ ಧ್ವಜ ನೀಡಿ ಅಭಿಯಾನ ಮಾಡಿದೆ. ಸದ್ಯ ಈಗ ಮತ್ತೊಂದು ಬೆಳವಣಿಗೆಯಾಗಿದ್ದು ನಾಳೆ ಸಮಾನ ಮನಸ್ಕರ ವೇದಿಕೆ ಕರೆ ನೀಡಿದ್ದ ಮಂಡ್ಯ ಬಂದ್ ಹಿಂಪಡೆಯಲಾಗಿದೆ.
ಮಂಡ್ಯ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ನಾಳೆ ನಡೆಯಬೇಕಿದ್ದ ಮಂಡ್ಯ ಬಂದ್ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ.
ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು ಬಂದ್ ಹಿಂಪಡೆದಿದೆ.
ಫೆ.7ರಂದು ಕರೆಕೊಟ್ಟಿದ್ದ ಬಂದ್ ತಾತ್ಕಾಲಿಕ ವಾಪಸ್ಸು ಪಡೆದಿದೆ. ಫೆ.9 ರಂದು ಮಂಡ್ಯ ನಗರ ಬಂದ್ಗೂ ಅವಕಾಶ ಕೊಡಬೇಡಿ. ಫೆ.9 ರಂದು ಮಂಡ್ಯ ನಗರವನ್ನ ಭಜರಂಗದಳ ಬಂದ್ ಮಾಡಿದ್ರೆ ಅದನ್ನ ವಿರೋಧಿಸಿ ಮತ್ತೆ ಬಂದ್ ಗೆ ಕರೆಕೊಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ.




