ಕೇರಳ: ದಕ್ಷಿಣ ಭಾರತದ “ದೇವರ ಸ್ವಂತ ನಾಡು” ಎಂದು ಕರೆಯಲ್ಪಡುವ ರಾಜ್ಯದ ಹೆಸರು ಅಧಿಕೃತವಾಗಿ ಬದಲಾಗುವ ಐತಿಹಾಸಿಕ ಘಳಿಗೆ ಬಂದಿದೆ. ಇನ್ಮುಂದೆ ‘ಕೇರಳ’ ರಾಜ್ಯವನ್ನು ‘ಕೇರಳಂ’ ಎಂದು ಕರೆಯಲು ಕೇಂದ್ರ ಸಚಿವ ಸಂಪುಟ ಬಿಗ್ ಅಪ್ರೂವಲ್ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದು, 2024ರ ಜೂನ್ 24 ರಂದು ಕೇರಳ ವಿಧಾನಸಭೆ ಸಲ್ಲಿಸಿದ್ದ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಈಗ ಅಧಿಕೃತ ಮುದ್ರೆ ಒತ್ತಿದೆ.
ಮಲಯಾಳಂ ಭಾಷೆಯ ಉಚ್ಚಾರಣೆಗೆ ಪೂರಕವಾಗಿ ಮತ್ತು ಆ ಮಣ್ಣಿನ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಕಳುಹಿಸಿತ್ತು. ಸಂವಿಧಾನದ ಶೆಡ್ಯೂಲ್ಗಳಿಗೆ ತಿದ್ದುಪಡಿ ತರುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಇದು ಕೇರಳಿಗರ ದಶಕಗಳ ಬೇಡಿಕೆಗೆ ಸಿಕ್ಕ ಜಯವಾಗಿದೆ.
ಈ ಬದಲಾವಣೆಯ ನಂತರ, ದೇಶದ ಎಲ್ಲಾ ಅಧಿಕೃತ ದಾಖಲೆಗಳು, ಭಾಷೆಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ರಾಜ್ಯದ ಹೆಸರು ‘ಕೇರಳಂ’ ಎಂದೇ ಮರುನಾಮಕರಣಗೊಳ್ಳಲಿದೆ. ಇದು ಕೇವಲ ಹೆಸರು ಬದಲಾವಣೆಯಲ್ಲ, ಬದಲಿಗೆ ಮಲಯಾಳಿಗಳ ಅಸ್ಮಿತೆ ಮತ್ತು ಸ್ವಾಭಿಮಾನಕ್ಕೆ ಸಂದ ದೊಡ್ಡ ಗೌರವವಾಗಿದೆ. t


