ದುರಂತದಲ್ಲಿ ಹುತಾತ್ಮರಾದ ಸೈನಿಕರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ ಕೂಡ ಒಬ್ಬರು ಎಂದು ತಿಳಿದು ಬಂದಿದೆ. ಚಿಕ್ಕೋಡಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾಗಿ ಚಿಕ್ಕೋಡಿಯ ಯೋಧ ಸೇರಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾಗಿ ಚಿಕ್ಕೋಡಿಯ ಯೋಧ ಸೇರಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಬಳಿ ಸೇನಾ ವಾಹನವೊಂದು ದಾರಿ ತಪ್ಪಿ ಕಂದಕಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹಲವು ಯೋಧರು ಗಾಯಗೊಂಡಿದ್ದಾರೆ.
ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ
ಮಾಹಿತಿ ಪಡೆದ ತಕ್ಷಣ ಸೇನಾಧಿಕಾರಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ದುರಂತದಲ್ಲಿ ಹುತಾತ್ಮರಾದ ಸೈನಿಕರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ ಕೂಡ ಒಬ್ಬರು ಎಂದು ತಿಳಿದು ಬಂದಿದೆ. ರಕ್ಷಣಾ ಸಿಬ್ಬಂದಿ ಐವರು ಮೃತ ಯೋಧರ ಶವಗಳನ್ನು ಹೊರತೆಗೆದಿದ್ದು, ಗಾಯಗೊಂಡವರಿಗೆ ನೆರವು ನೀಡುತ್ತಿದ್ದಾರೆ. ಕೆಲವು ಯೋಧರಿಗೆ ಗಂಭೀರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಹಲವರಿಗೆ ಮಾರಣಾಂತಿಕ ಗಾಯ
ವಾಹನದಲ್ಲಿ ಹತ್ತು ಸೈನಿಕರಿದ್ದು, ಐವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ವೈಟ್ನೈಟ್ಕಾರ್ಪ್ಸ್ನ ಎಲ್ಲಾ ಶ್ರೇಣಿಗಳು ಪೂಂಚ್ ಸೆಕ್ಟರ್ನಲ್ಲಿ ಕಾರ್ಯಾಚರಣೆಯ ಕರ್ತವ್ಯದ ಸಮಯದಲ್ಲಿ ವಾಹನ ಅಪಘಾತದಲ್ಲಿ ಐವರು ವೀರ ಸೈನಿಕರ ದುರಂತ ನಷ್ಟದ ಬಗ್ಗೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಭಾರತೀಯ ಸೇನೆಯ 16 ಕಾರ್ಪ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.
100-150 ಅಡಿ ಆಳದ ಕಂದಕ ಉರುಳಿದ ವಾಹನ
ನೀಲಂ ಹೆಡ್ಕ್ವಾರ್ಟರ್ಸ್ನಿಂದ ಬಲ್ನೋಯಿ ಘೋರಾ ಪೋಸ್ಟ್ ಕಡೆಗೆ ಹೋಗುತ್ತಿದ್ದ 11 MLI ನ ಮಿಲಿಟರಿ ವಾಹನವು ಘೋರಾ ಪೋಸ್ಟ್ ತಲುಪಿದ ತಕ್ಷಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ವಾಹನ ಸುಮಾರು 100-150 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದ್ದು, ಮಾಹಿತಿ ಬಂದ ತಕ್ಷಣ 11 ಎಂಎಲ್ಐನ ಕ್ವಿಕ್ ರೆಸ್ಪಾನ್ಸ್ ಟೀಮ್ (QRT) ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.


