ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ಮಂಡಳಿಯ ಚುನಾವಣೆಯಲ್ಲಿ ಇವಿಎಂ ಮಿಷನ್ ಬಳಸಲಾಗಿದ್ದು ಸಾರಾ ಗೋವಿಂದ್ ಬಣದ ಎಂ. ನರಸಿಂಹಲು ಅಭೂತಪೂರ್ವ ಗೆಲುವು ಪಡೆದಿದ್ದಾರೆ.
ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಆರ್.ಸುಂದರ್ ರಾಜು ಅವರನ್ನು ಮಣಿಸುವ ಮೂಲಕ ವೈಭವಿ ಚಿತ್ರಮಂದಿರದ ಮಾಲೀಕ ಎಂ.ನರಸಿಂಹಲು ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕರ್ನಾಟಕ ಚಲನಚಿತ್ರ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್ ಆಯ್ಕೆ ಆಗಿದ್ದಾರೆ.
ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕ್ಷೇತ್ರಗಳಿಂದ ಮಂಡಳಿಯ ವಿವಿಧ ಸ್ಥಾನಗಳಿಗೆ ಒಟ್ಟು 104 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಈ ಬಾರಿ ಅದರಂತೆ ಸ್ಪರ್ಧಿಸಿದ್ದ ಎಂ.ನರಸಿಂಹಲು ಅವರು ಪ್ರತಿಸ್ಪರ್ಧಿ ಆರ್.ಸುಂದರ್ ರಾಜು ವಿರುದ್ಧ ಗೆಲುವು ಪಡೆದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2024-25 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಿನ್ನೆ ಮಧ್ಯಾಹ್ನದಿಂದ ಚುನಾವಣೆ ನಡೆಸಲಾಗಿತ್ತು. ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಇವಿಎಂ ಅನ್ನು ಚುನಾವಣೆಯಲ್ಲಿ ಬಳಕೆ ಮಾಡಲಾಗಿತ್ತು. ಮಾಜಿ ಅಧ್ಯಕ್ಷ ಸಾರಾ ಗೋವಿಂದು ಗುಂಪು ಹಾಗೂ ಭಾಮಾ ಹರೀಶ್ ಅವರ ಗುಂಪಿನ ನಡುವೆ ಜಿದ್ದಾಜಿದ್ದಿಯೇ ನಡೆದಿತ್ತು ಎನ್ನಬಹುದು. ಆದರೆ ಅಂತಿಮವಾಗಿ ಫಲಿತಾಂಶದಲ್ಲಿ ಸಾರಾ ಗೋವಿಂದು ಬಣಕ್ಕೆ ವಿಜಯ ಮಾಲೆ ಒಲಿದು ಬಂದಿದೆ.