ಕ್ರೈಂ ಸ್ಟೋರಿರಾಜ್ಯಸುದ್ದಿ

ಕಾಮಗಾರಿ ವಿರೋಧಿಸಿದಕ್ಕೆ ಜಾತಿ ನಿಂದನೆ ; ಮಹಿಳೆ ಆತ್ಮಹತ್ಯೆ 8 ಮಂದಿ ವಿರುದ್ಧ ಕೇಸ್​

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನರೇಗಾ ಕಾಮಗಾರಿ ವಿರೋಧಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಲಾಗಿದ್ದು, ಇದರಿಂದ ಮನನೊಂದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆ ದೀದ್ಗಿ ಮೈಲವ್ವ ಅವರ ಪುತ್ರನು ಗ್ರಾಮ ಪಂಚಾಯಿತಿ ಪಿಡಿಒ ಸೇರಿ ಎಂಟು ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಜಾತಿನಿಂದನೆಯ ದೂರು ದಾಖಲಿಸಿದ್ದಾನೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಗ್ರಾಮದಲ್ಲಿ ದೀದ್ಗಿ ಮೈಲವ್ವ ಅವರು ಸಾಗುವಳಿ ಮಾಡಿದ್ದರು. ಐದು ಎಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದರು. ಕಳೆದ 15-20 ವರ್ಷದಿಂದ ಅವರು ಸಾಗುವಳಿ ಮಾಡುತ್ತಿದ್ದರು. ಆದರೆ, ಪಂಚಾಯಿತಿಯಿಂದ ನರೇಗಾ ಕಾಮಗಾರಿ ಕೈಗೊಳ್ಳಲಾಗಿದ್ದು, ಇದನ್ನು ದೀದ್ಗಿ ಮೈಲವ್ವ ಅವರು ವಿರೋಧಿಸಿದ್ದರು. ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ಏಪ್ರಿಲ್‌ 5ರಂದು ಕಾಮಗಾರಿ ಆರಂಭಿಸಿದ್ದನ್ನು ಇವರು ವಿರೋಧಿಸಿದ್ದರು.

ಕಾಮಗಾರಿಗೆ ವಿರೋಧಿಸಿದರೂ ಮುಂದುವರಿಸಿದ ಕಾರಣ ದೀದ್ಗಿ ಮೈಲವ್ವ ಅವರು ಏಪ್ರಿಲ್‌ 5ರಂದೇ ವಿಷಸೇವಿಸಿದ್ದರು. ಕೂಡಲೇ ಮಹಿಳೆಯನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮೃತಪಟ್ಟಿದ್ದರು. ಹಾಗಾಗಿ, ದೀದ್ಗಿ ಮೈಲವ್ವ ಅವರ ಪುತ್ರ ದುರುಗಪ್ಪ ಅವರು ಈಟ್ಟಗಿ ಪೊಲೀಸ್‌ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪಿಡಿಒ ಖಾಜಾಬಾನು, ಅಧ್ಯಕ್ಷ ಉದಯ್ ಚಿಲಗೋಡು, ನರೇಗಾ ಸಿಬ್ಬಂದಿ ಬಸವರಾಜ್, ಪ್ರಕಾಶ್, ಕೊಟ್ರೇಶ್, ಶಿವಕುಮಾರ್, ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. “ನನ್ನ ತಾಯಿಗೆ ಜಾತಿನಿಂದನೆ ಮಾಡಿದ್ದಾರೆ. ಅನ್ನೋರು ತಾಯಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದ ಮನನೊಂದ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ದೂರು ದಾಖಲಿಸಿದ್ದಾರೆ.

Comments (0)

Your email address will not be published. Required fields are marked *

Back to top button