ವಿಶೇಷಸುದ್ದಿ

ಚರಂಡಿ ಹೊಂಡಕ್ಕೆ ಬಿದ್ದ ನವಿಲು, ಜೀವದ ಹಂಗು ತೊರೆದು ರಾಷ್ಟ್ರ ಪಕ್ಷಿಯನ್ನು ರಕ್ಷಿಸಿದ ರಜನಿ ಶೆಟ್ಟಿ

ಮಂಗಳೂರು : ಇತ್ತೀಚಿನ ದಿನಗಳಲ್ಲಿ ತಮ್ಮವರ ಕಷ್ಟಕ್ಕೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಜನರ ಮಧ್ಯೆ ಕೆಲವೊಬ್ಬರು ಮೂಕ ಪ್ರಾಣಿಗಳ ನೋವಿಗೆ ದನಿಯಾಗಿ, ಅವುಗಳ ರಕ್ಷಣೆಗೆ ನಿಲ್ಲುವವರಿದ್ದಾರೆ. ಅಂತಹ ಮಹಾನ್‌ ಹೃದಯಿಗಳಲ್ಲಿ ಒಬ್ಬರು ಮಂಗಳೂರಿನ ಪ್ರಾಣಿಪ್ರಿಯೆ . ಪ್ರತಿನಿತ್ಯ ನೂರಾರು ಬೀದಿ ನಾಯಿಗಳಿಗೆ ಅನ್ನ ನೀಡುವ ಇವರು ಮೂಕ ಪ್ರಾಣಿಗಳ ನೋವಿಗೆ ಧ್ವನಿಯಾಗಿ ಅವುಗಳ ರಕ್ಷಣೆ, ಪಾಲನೆ ಕೆಲಸವನ್ನು ಕೂಡಾ ಮಾಡುತ್ತಿದ್ದಾರೆ. ಇದೀಗ ಅವರು ತನ್ನ ಪ್ರಾಣದ ಹಂಗನ್ನು ತೊರೆದು ಚರಂಡಿ ಹೊಂಡಕ್ಕೆ ಬಿದ್ದಂತಹ ನವಿಲಿನ ರಕ್ಷಣೆಯನ್ನು ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್‌ ಗಂಭೀರವಾಗಿ ಗಾಯಗೊಂಡಿದ್ದ ನವಿಲು ಸಾವನ್ನಪ್ಪಿದೆ. ಈ ಕುರಿತ ಭಾವನಾತ್ಮಕ ವಿಡಿಯೋವೊಂದನ್ನು ರಜನಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಂಗಳೂರಿನ ಸಮೀಪದಲ್ಲಿ ಖುಷಿಯಿಂದ ಹಾರಿ ಬರುತ್ತಿರುವ ವೇಳೆ ವಿದ್ಯುತ್‌ ತಂತಿಗೆ ಸ್ಪರ್ಶಿಸಿ ನವಿಲೊಂದು ಚರಂಡಿ ಹೊಂಡಕ್ಕೆ ಬಿದ್ದಿರುತ್ತದೆ. ಇದನ್ನು ಕಂಡಂತಹ ಅಲ್ಲಿನ ಸ್ಥಳೀಯ ನಿವಾಸಿ ಮೊಹಮ್ಮದ್‌ ಸಾದಿಕ್‌ ಎಂಬವರು ತಕ್ಷಣ ರಜನಿ ಶೆಟ್ಟಿಯವರಿಗೆ ಕರೆ ಮಾಡಿ ನವಿಲನ್ನು ರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಆ ತಕ್ಷಣ ಅಲ್ಲಿಗೆ ಧಾವಿಸಿದ ರಜನಿ ಶೆಟ್ಟಿ ತಮ್ಮ ಪ್ರಾಣದ ಹಂಗನ್ನು ತೊರೆದು ಚರಂಡಿ ಹೊಂಡಕ್ಕೆ ಇಳಿದು ನವಿಲನ್ನು ರಕ್ಷಿಸಿದ್ದಾರೆ. ಜೊತೆಗೆ ಗಂಭೀರವಾಗಿ ಗಾಯಗೊಂಡಿದ್ದ ಆ ಮೂಕ ಜೀವಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಂತಹ ಕೆಲಸವನ್ನು ಕೂಡಾ ಮಾಡಿದ್ದಾರೆ. ಆದರೆ ದಾರಿ ಮಧ್ಯೆ ನವಿಲು ಸಾವನ್ನಿಪ್ಪಿದೆ. ನಂತರ ಅರಣ್ಯಾಧಿಕಾರಿಗಳು ಹಾಗೂ ತನ್ನ ಪತಿಯ  ಸಹಾಯದಿಂದ ಅವರು ನವಿಲನ್ನು ಮಣ್ಣುಮಾಡಿದ್ದಾರೆ.

ಈ ನೋವಿನ ಕಥೆಯನ್ನು ರಜನಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಹೊಂಡಕ್ಕೆ ಬಿದ್ದ ನವಿಲನ್ನು ರಜನಿ ಶೆಟ್ಟಿ ಜೋಪಾನವಾಗಿ ರಕ್ಷಣೆ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ರಜನಿ ಶೆಟ್ಟಿಯವರ ಮಾನವೀಯ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

Comments (0)

Your email address will not be published. Required fields are marked *

Back to top button