ಕಾರವಾರ : ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದ್ದು ಸರಕಾರ ವಾಡಿಕೆಯಂತೆ ಜೂನ್ ತಿಂಗಳಿನಿಂದ ಜುಲೈ 31 ರ ವರಗೆ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಬಂದುರುಗಳಲ್ಲಿ ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ.
ಮೀನುಗಾರಿಕೆ ನಿಷೇಧದ ಹಿನ್ನೆಲೆ ಕಾರವಾರ ಸೇರಿದಂತೆ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಂದರುಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕಿವೆ. ಜತೆಗೆ ಈ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಕೂಡ ಶುಕ್ರವಾರ ಬಂದರಿಗೆ ಹಿಂದಿರುಗಿವೆ.
ಮಳೆಗಾಲದಲ್ಲಿ ಮೀನುಗಳ ಸಂತಾಭಿವೃದ್ಧಿ ಒಂದೆಡೆಯಾದರೆ ಭೀಕರ ಅಲೆಗಳು ಹಾಗೂ ಗಾಳಿಯ ರಭಸ ಕೂಡ ಇರುವುದರಿಂದ ಅಪಾಯವಾಗುವ ಹಿನ್ನಲೆಯಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆ ಬೋಟುಗಳು ಇಳಿಯುವುದಿಲ್ಲ. ಆದರೆ ದಡದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಮಾಡಲು ಅವಕಾಶ ನಿಡಲಾಗಿದೆ. ಮೀನುಗಾರಿಕೆಗಾಗಿ ಅಸ್ಸಾಂ, ಬಿಹಾರ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳದಿಂದ ಬಂದ ಮೀನುಗಾರ ಕಾರ್ಮಿಕರು ಕೂಡ ಎರಡು ತಿಂಗಳು ಬೋಟುಗಳು ಸಮುದ್ರಕ್ಕೆ ಹೋಗದಿರುವುದರಿಂದ ತಮ್ಮ ಸ್ವಂತ ಊರುಗಳಿಗೆ ವಾಪಾಸಾಗಿದ್ದಾರೆ.
ಆಳ ಸಮುದ್ರದ ಮೀನುಗಾರಿಕೆ ಬಂದ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಕಾಣ ಸಿಗುವುದಿಲ್ಲ. ಹೀಗಾಗಿ ಸದ್ಯ ಮಳೆಗಾಲದಲ್ಲಿ ಮಾರುಕಟ್ಟೆಗೆ ಏಂಡಿ ಮೀನುಗಳು ಮಾತ್ರ ಪೂರೈಕೆಯಾಗಲಿವೆ. ಮುಂದಿನ ಎರಡು ತಿಂಗಳು ಗೋವಾ ಹಾಗೂ ಘಟ್ಟದ ಮೇಲಿನ ಪ್ರದೆಶಗಳಿಗೆ ಮೀನುಗಳನ್ನು ಸಾಗಿಸುವ ಲಾರಿಗಳ ಓಡಾಟವೂ ಕಡಿಮೆಯಾಗಲಿದೆ.
‘ಈ ಬಾರಿ ಮೀನುಗಾರಿಕೆಯಿಂದ ಹೆಚ್ಚಿನ ಆದಾಯ ಗಳಿಸಿಲ್ಲ. ಮೀನುಗಳ ಕಡಿಮೆ ಪ್ರಮಾಣದಲ್ಲಿ ಸಿಕ್ಕುವುದರಿಂದ ಹೆಚ್ಚಿನ ಬೋಟುಗಳು ಸಮುದ್ರಕ್ಕೆ ಇಳಿಯಲಿಲ್ಲ. ಬೋಟುಗಳ ರಿಪೇರಿ ಹಾಗೂ ಇನ್ನಿರತ ಖರ್ಚುಗಳೇ ಹೆಚ್ಚಿದ್ದು ಮುಂದಿನ ಹಂಗಾಮಿನಲ್ಲಿ ಉತ್ತಮ ಮೀನಿನ ಶಿಕಾರಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಜಿಲ್ಲಾ ಮೀನು ಮಾರಾಟಗಾರರ ಸಹಕಾರ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ ಮಾಹಿತಿ ನೀಡಿದ್ಧಾರೆ.