ಸುದ್ದಿ

ಮಳೆಗಾಲ ಶುರು.. 2 ತಿಂಗಳು ಆಳಸಮುದ್ರ ಮೀನುಗಾರಿಕೆ ಬಂದ್‌: ಕಾರವಾರ ಬಂದರಿನಲ್ಲಿ ಬೋಟ್ ಲಂಗರು

ಕಾರವಾರ : ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದ್ದು ಸರಕಾರ ವಾಡಿಕೆಯಂತೆ ಜೂನ್‌ ತಿಂಗಳಿನಿಂದ ಜುಲೈ 31 ರ ವರಗೆ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಬಂದುರುಗಳಲ್ಲಿ ಮೀನುಗಾರಿಕೆ ಬೋಟುಗಳು ಲಂಗರು ಹಾಕಿವೆ.

ಮಳೆಗಾಲದ ಪ್ರಾರಂಭದಲ್ಲಿ ಅಂದರೆ ಜೂನ್‌ ಮತ್ತು ಜುಲೈ ತಿಂಗಳ ಸಮಯ ಸಮುದ್ರದಲ್ಲಿ ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಈ ಸಮಯದಲ್ಲಿ ಸರಕಾರವು ರಾಜ್ಯದ ಕರಾವಳಿಯ ಆಳ ಸಮುದ್ರದಲ್ಲಿ ಪರ್ಷಿನ್‌ ಬೋಟ್‌ ಹಾಗೂ ಟ್ರಾಲರ್‌ ಬೋಟುಗಳಿಂದ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಿದೆ.

ಮೀನುಗಾರಿಕೆ ನಿಷೇಧದ ಹಿನ್ನೆಲೆ ಕಾರವಾರ ಸೇರಿದಂತೆ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಂದರುಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕಿವೆ. ಜತೆಗೆ ಈ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಕೂಡ ಶುಕ್ರವಾರ ಬಂದರಿಗೆ ಹಿಂದಿರುಗಿವೆ.

ಈಗಾಗಲೇ ಮೀನುಗಾರರು ಬೋಟುಗಳನ್ನು ಕಟ್ಟಿ ಸಂರಕ್ಷಿಸುತ್ತಿದ್ದಾರೆ. ಇನ್ನು ಬೋಟುಗಳ ರಿಪೇರಿ ಕಾರ್ಯಗಳು ಕೂಡ ನಡೆಯಲಿವೆ. ಮೀನುಗಾರರು ಬೋಟುಗಳು ಹಾಗೂ ಮೀನುಗಾರಿಕೆಯ ಪರಿಕರಗಳನ್ನು ಒಂದೆಡೆ ಸೇರಿಸಿ ಜೋಪಾನ ಮಾಡುತ್ತಿದ್ದಾರೆ. ಜತೆಗೆ ಹರಿದ ಬಲೆಗಳನ್ನು ಕಟ್ಟಿ ಜೋಡಿಸಿ ತಾಡಪತ್ರೆಯಿಂದ ಮುಚ್ಚಿ ಮುಂದಿನ ಹಂಗಾಮಿಗೆ ಸಿದ್ಧರಾಗುತ್ತಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಮೇಲ್ಸೇತುವೆಯ ಕೆಳಗೆ ಮೀನುಗಾರರು ತಮ್ಮ ಬಲೆಗಳನ್ನು ಹೆಣೆಯುತ್ತಿರುವ ದೃಶ್ಯಗಳ ಕಂಡು ಬರುತ್ತಿವೆ. ಅಲ್ಲದೇ ಹೆಣೆದ ಬಲೆಗಳು ಸೇರಿದಂತೆ ಸಣ್ಣ ದೋಣಿಗಳನ್ನು ಕೂಡ ಅಲ್ಲಿಯೇ ಸಂರಕ್ಷಿಸುತ್ತಿದ್ದಾರೆ.

ಮಳೆಗಾಲದಲ್ಲಿ ಮೀನುಗಳ ಸಂತಾಭಿವೃದ್ಧಿ ಒಂದೆಡೆಯಾದರೆ ಭೀಕರ ಅಲೆಗಳು ಹಾಗೂ ಗಾಳಿಯ ರಭಸ ಕೂಡ ಇರುವುದರಿಂದ ಅಪಾಯವಾಗುವ ಹಿನ್ನಲೆಯಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆ ಬೋಟುಗಳು ಇಳಿಯುವುದಿಲ್ಲ. ಆದರೆ ದಡದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಮಾಡಲು ಅವಕಾಶ ನಿಡಲಾಗಿದೆ. ಮೀನುಗಾರಿಕೆಗಾಗಿ ಅಸ್ಸಾಂ, ಬಿಹಾರ, ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳದಿಂದ ಬಂದ ಮೀನುಗಾರ ಕಾರ್ಮಿಕರು ಕೂಡ ಎರಡು ತಿಂಗಳು ಬೋಟುಗಳು ಸಮುದ್ರಕ್ಕೆ ಹೋಗದಿರುವುದರಿಂದ ತಮ್ಮ ಸ್ವಂತ ಊರುಗಳಿಗೆ ವಾಪಾಸಾಗಿದ್ದಾರೆ.

ಆಳ ಸಮುದ್ರದ ಮೀನುಗಾರಿಕೆ ಬಂದ್‌ ಆಗಿರುವುದರಿಂದ ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಕಾಣ ಸಿಗುವುದಿಲ್ಲ. ಹೀಗಾಗಿ ಸದ್ಯ ಮಳೆಗಾಲದಲ್ಲಿ ಮಾರುಕಟ್ಟೆಗೆ ಏಂಡಿ ಮೀನುಗಳು ಮಾತ್ರ ಪೂರೈಕೆಯಾಗಲಿವೆ. ಮುಂದಿನ ಎರಡು ತಿಂಗಳು ಗೋವಾ ಹಾಗೂ ಘಟ್ಟದ ಮೇಲಿನ ಪ್ರದೆಶಗಳಿಗೆ ಮೀನುಗಳನ್ನು ಸಾಗಿಸುವ ಲಾರಿಗಳ ಓಡಾಟವೂ ಕಡಿಮೆಯಾಗಲಿದೆ.

‘ಈ ಬಾರಿ ಮೀನುಗಾರಿಕೆಯಿಂದ ಹೆಚ್ಚಿನ ಆದಾಯ ಗಳಿಸಿಲ್ಲ. ಮೀನುಗಳ ಕಡಿಮೆ ಪ್ರಮಾಣದಲ್ಲಿ ಸಿಕ್ಕುವುದರಿಂದ ಹೆಚ್ಚಿನ ಬೋಟುಗಳು ಸಮುದ್ರಕ್ಕೆ ಇಳಿಯಲಿಲ್ಲ. ಬೋಟುಗಳ ರಿಪೇರಿ ಹಾಗೂ ಇನ್ನಿರತ ಖರ್ಚುಗಳೇ ಹೆಚ್ಚಿದ್ದು ಮುಂದಿನ ಹಂಗಾಮಿನಲ್ಲಿ ಉತ್ತಮ ಮೀನಿನ ಶಿಕಾರಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಜಿಲ್ಲಾ ಮೀನು ಮಾರಾಟಗಾರರ ಸಹಕಾರ ಫೆಡರೇಷನ್‌ ಅಧ್ಯಕ್ಷ ರಾಜು ತಾಂಡೇಲ ಮಾಹಿತಿ ನೀಡಿದ್ಧಾರೆ.

Comments (0)

Your email address will not be published. Required fields are marked *

Back to top button