ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ವಸಿಷ್ಠ ಸೊಸೈಟಿ ಹಾಗೂ ಮತ್ತಿತರ ಸಹಕಾರಿ ಸಂಸ್ಥೆಗಳಲ್ಲಿ ಹಣಕಾಸಿನ ವಂಚನೆಗೆ ಒಳಗಾದವರ ನಿಯೋಗದೊಂದಿಗೆ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ, ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಮಾತನಾಡಿದರು.

ಭೇಟಿ ಸಂದರ್ಭ ಉಪ-ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್, ಶ್ರೀ ಡಾ. ಶಂಕರ್ ಗುಹಾ, ಶ್ರೀ ಹರೀಶ್ ವೆಂಕಟರಾಮಯ್ಯ, ಶ್ರೀ ಚಂದ್ರಶೇಖರ್, ಶ್ರೀ ಶ್ರೀನಿವಾಸ್, ಶ್ರೀಮತಿ ಭಾಮಿನಿ, ಶ್ರೀಮತಿ ಕೆ.ಸಿ. ಸರಳ ಮತ್ತು ಶ್ರೀ ಕೆ.ಎಸ್ ಮಂಜುನಾಥ್ ಅವರನ್ನು ಒಳಗೊಂಡ ನಿಯೋಗವು ಜೊತೆಗಿತ್ತು. ಇವರೆಲ್ಲರೂ ನ್ಯಾಯಕ್ಕಾಗಿ ಎದುರು ನೋಡುತ್ತಿರುವ ಸಂತ್ರಸ್ತರಾಗಿದ್ದಾರೆ. ಕೂಡಿಟ್ಟ ದೊಡ್ಡ ಮೊತ್ತದ ಠೇವಣಿ ಹಣವನ್ನು ಕಳೆದುಕೊಂಡು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಂತ್ರಸ್ತರು ಕೇವಲ ಅವರ ಹಣವನ್ನು ಮಾತ್ರ ಕಳೆದುಕೊಂಡಿಲ್ಲ, ಹಲವು ಮಂದಿ ಪರಿಹಾರ ಕಾಣದೆ ನೋವಿನಲ್ಲೇ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ಹೇಳಿದರು.

ವಂಚನೆ ಪ್ರಕರಣವನ್ನು ಐದು ತಿಂಗಳ ಹಿಂದೆ ಸಿಬಿಐಗೆ ವಹಿಸಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಪರಿಹಾರ ಕೊಡಿಸುವಂತೆ ಹಲವು ಬಾರಿ ಸಿಬಿಐ ಹಾಗೂ ಕೇಂದ್ರ ಸರ್ಕಾರವನ್ನು ಅಲವತ್ತುಕೊಂಡರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು.

ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಪ್ರಕರಣದ ಆಳವನ್ನು ಅರ್ಥೈಸಿಕೊಂಡು ನೀಡಿದ ಸ್ಪಂದನೆಯು ಸಂತ್ರಸ್ತರ ಮುಖದಲ್ಲಿ ಆಶಾಕಿರಣವನ್ನು ಮೂಡಿಸಿದೆ. ಎಲ್ಲಾ ಸಂತ್ರಸ್ತರಿಗೆ ಅರ್ಹವಾದ ನ್ಯಾಯವನ್ನು ಒದಗಿಸಲು ಮತ್ತು ವಂಚಕರನ್ನು ಶಿಕ್ಷಿಸಲು ಕಾನೂನು ಚೌಕಟ್ಟಿನೊಳಗೆ ತ್ವರಿತ ಮತ್ತು ನ್ಯಾಯಯುತ ಪರಿಹಾರ ಒದಗಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಹೇಳಿದರು.

ಹಣಕಾಸು ವಂಚನೆಗೆ ಒಳಗಾದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದೆ ಬಂದು ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ದಿಟ್ಟ ನಾಯಕತ್ವವನ್ನು ರುಜುವಾತು ಪಡಿಸಿದರು.
ನೊಂದವರ ಧ್ವನಿಯಾಗಿದ್ದಕ್ಕೆ, ತ್ವರಿತ ನ್ಯಾಯ ಕೊಡಿಸಲು ಮುಂದಾಗಿದ್ದಕ್ಕೆ ಪ್ರಿಯಾಂಕಾ ಗಾಂಧಿ ಅವರಿಗೆ ಅನಂತ ಧನ್ಯವಾದಗಳು.