ಕಳೆದ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಎದುರಾಳಿಗಳನ್ನು ಸೋಲಿಸಲು ಬಿಜೆಪಿ ನಾಯಕರೇ ಪರಸ್ಪರ ಸುಪಾರಿ ಕೊಟ್ಟಿರುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಅಂಥದ್ದೇ ಸುಪಾರಿ ಪಾಲಿಟಿಕ್ಸ್ ಲೋಕಸಭಾ ಎಲೆಕ್ಷನ್ನಲ್ಲೂ ಕಾಣಿಸಿಕೊಳ್ಳುವ ಚರ್ಚೆ ಶುರುವಾಗಿದೆ. ಅದಕ್ಕೆ ಪ್ರಮುಖ ಕಾರಣ ಕೇಂದ್ರ ಸಚಿವರಾಗಲು ಈಗಾಗಲೇ ಪೈಪೋಟಿ ಶುರುವಾಗಿರುವುದು. ರಾಜ್ಯ ಬಿಜೆಪಿ ಅಭ್ಯರ್ಥಿಗಳಲ್ಲಿಈಗ ಕೇಂದ್ರ ಮಂತ್ರಿಗಿರಿಯ ಕನಸು ಹೆಚ್ಚಾಗಿದೆ.
ಗೆಲ್ಲುವ ಮುನ್ನವೇ ಮೋದಿ ಸಂಪುಟದಲ್ಲಿ ಮಂತ್ರಿಯಾಗೋ ಕನಸು ಹಲವರಲ್ಲಿದೆ. ಮಾಜಿ ಸಿಎಂ ಬೊಮ್ಮಾಯಿ, ವಿ. ಸೋಮಣ್ಣ, ಜಗದೀಶ್ ಶೆಟ್ಟರ್, ಲಿಂಗಾಯತ ಕೋಟಾದಲ್ಲಿ ಗದ್ದುಗೆಯೇರಲು ತುದಿಗಾಲಲ್ಲಿ ನಿಂತಿದ್ದಾರೆ. ಮಾಜಿ ಸಚಿವರಾದ ಸುಧಾಕರ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದಲೂ ಮಂತ್ರಿಗಿರಿ ಕನಸು ಕಾಣುತ್ತಿದ್ದು, ಜಾತಿ ಲೆಕ್ಕಾಚಾರ ಮತ್ತಿತರ ಲಾಬಿಗಳ ಮೂಲಕ ಮಂತ್ರಿಗಿರಿ ಸಿಗುವ ಆಸೆಯಲ್ಲಿದ್ದಾರೆ.
ಮಾಜಿ ಸಚಿವರಾದ ಶ್ರೀರಾಮುಲು, ಕಾರಜೋಳ, ಸಂಸದ ಉಮೇಶ್ ಜಾಧವ್ ಸೇರಿ ಹಲವು ಇತರೆ ಆಕಾಂಕ್ಷಿಗಳಲ್ಲಿ ಈ ದೂರಾಲೋಚನೆ ಇರೋದಾಗಿ ಬೆಂಬಲಿಗರು ಬಾಯ್ಬಿಟ್ಟಿದ್ದಾರೆ. ಪರಿಶಿಷ್ಟ ಕೋಟಾದಡಿ ಸಚಿವ ಸ್ಥಾನಕ್ಕೆ ರಾಮುಲು, ಜಾಧವ್, ಕಾರಜೋಳ ಪ್ರಯತ್ನ ಮಾಡಲಿದ್ದಾರೆ. ಕೇಂದ್ರ ಮಂತ್ರಿ ಆಗಬೇಕಾದರೆ ತಾವು ಗೆಲ್ಲಲೇಬೇಕು. ಜತೆಗೆ ತಮ್ಮ ಕಾಂಪಿಟೇಟರ್ ಸೋತರೆ ಒಳ್ಳೆಯದು ಎಂಬ ಲೆಕ್ಕಾಚಾರ ಹಲವರಲ್ಲಿದೆ.
ಒಳಗೊಳಗೇ ತಾನು ಮಾತ್ರ ಗೆದ್ದು ರೇಸ್ ನಲ್ಲಿರುವ ಇತರರು ಸೋಲಲಿ ಎಂಬ ಆಸೆ ವ್ಯಕ್ತಪಡಿಸ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಒಳೇಟು ನೀಡಿ ಎದುರಾಳಿಯನ್ನು ಸೋಲಿಸುವ ತಂತ್ರ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಬಿಜೆಪಿ ಪಾಳೆಯದಲ್ಲಿ ಹೊಸ ಲೆಕ್ಕಾಚಾರ ಶುರುವಾಗುವ ಸಾಧ್ಯತೆ ಇದೆ. ಕೆಲ ಕ್ಷೇತ್ರಗಳಲ್ಲಿ ಪರಸ್ಪರ ಸೋಲಿಸಲು ಫಂಡ್ ಮಾಡುವ ಬಗ್ಗೆಯೂ ಚರ್ಚೆ ಶುರುವಾಗಿದೆ.