ರಾಮನಗರ: ಜನಪದ ಲೋಕದಲ್ಲಿ ನಡೆದ ತಿಂಗಳ ಅತಿಥಿ 91 ಕಾರ್ಯಕ್ರಮದಲ್ಲಿ ಜನಪದ ಕಲಾವಿದೆ ವಡ್ಡಗೆರೆ ಕದಿರಮ್ಮಅವರನ್ನು ಸನ್ಮಾನಿಸಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಾವಿದರಿಗೆ ಗೌರವಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾದ ಡಾ.ಬಾನಂದೂರು ಕೆಂಪಯ್ಯರವರು, ಬದುಕಿಗೆ ಉದ್ಯೋಗ ನೀಡಿದ ಪುಣ್ಯಾತ್ಮ ಎಚ್.ಎಲ್.ನಾಗೇಗೌಡರನ್ನು ಸ್ಮರಿಸಿದರು. ಕದರಮ್ಮ ನಾಗಮ್ಮನ ಮಹಾಸತಿ ಕಾವ್ಯವನ್ನು ಹಾಡುವ ಕೊನೆಯ ಕೊಂಡಿ ಇವರ ನಂತರ ಮುಂದುವರಿಕೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ವಡ್ಡಗೆರೆ ನಾಗರಾಜಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀ ಸು.ತ ರಾಮೇಗೌಡರು ಜಾನಪದ ಲೋಕದ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು.
ಗೌರವ ಸ್ವೀಕರಿಸಿದ ಕಲಾವಿದೆ ಶ್ರೀಮತಿ ಕದರಮ್ಮ ಮತ್ತು ತಂಡದವರು ಬಸವಣ್ಣನ ಕುರಿತ ಪ್ರಾರ್ಥನೆ, ವಡ್ಡಗೆರೆ ನಾಗಮ್ಮನ ಕುರಿತ ಕಾವ್ಯದ ಭಾಗಗಳು, ಸೋಬಾನೆ ಪದಗಳನ್ನು ಹಾಡಿದರು. ಗಂಗಮ್ಮ, ರಂಗಮ್ಮ, ಲಕ್ಷ್ಮಿದೇವಮ್ಮ ದನಿಗೂಡಿಸಿದರು. ಕಾರ್ಯನಿವಾಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಕ್ಯೂರೇಟರ್ ಡಾ.ಯು.ಎಂ ರವಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.
ರಂಗಸಹಾಯಕರಾದ ಪ್ರದೀಪ್. ಎಸ್, ಎಚ್.ಎಲ್.ನಾಗೇಗೌಡ ಕಲಾಶಾಲೆ ವಿದ್ಯಾರ್ಥಿಗಳು ಮತ್ತು ಡಿಪ್ಲಮೋ ವಿದ್ಯಾರ್ಥಿಗಳು ಹಾಗೂ ಜಾನಪದ ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸರಳವಾಗಿ ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಕಲಾಶಾಲೆ ವಿದ್ಯಾರ್ಥಿಗಳ ತಮಟೆ ವಾದನ, ಪಟ ಕುಣಿತದ ಪ್ರದರ್ಶನದಲ್ಲಿ ರಾಸುಗಳು ಕಿಚ್ಚಿನಲ್ಲಿ ಬೆದರಿ ಹಾದವು. ಪ್ರವಾಸಿಗರು ಸಂಕ್ರಾಂತಿಯ ಸೊಬಗನ್ನು ಕಣ್ತುಂಬಿಕೊಂಡರು.