ರಾಜಕೀಯರಾಜ್ಯಸುದ್ದಿ

ಪ್ರತಾಪ್​ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೋರ್ಟ್ ತಡೆ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ಗೆ ನೋಟಿಸ್

ಮೈಸೂರು ; ಸಂಸದ ಪ್ರತಾಪಸಿಂಹ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​​ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ ನೀಡಿದ್ದ ದೂರಿನನ್ವಯ ನೋಟಿಸ್ ಜಾರಿ ಮಾಡಿದ್ದು, ಫೆ.13ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಸಂಸದ ಪ್ರತಾಪ್​ ಸಿಂಹ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡದಂತೆ ಕೋರ್ಟ್​ ಸೂಚನೆ ನೀಡಿದೆ. ಸಂಸದ ಪ್ರತಾಪ್ ಸಿಂಹ ಯಾವುದೇ ಒಂದು ವಿಚಾರವಾಗಿ ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದ ಮರುದಿನವೇ ಎಂ.ಲಕ್ಷ್ಮಣ್ ಅವರು ಕೂಡ ಪತ್ರಿಕಾಗೋಷ್ಠಿ ಮಾಡಿ ಅವರ ಹೇಳಿಕೆಗಳಿಗೆ ವಾಗ್ದಾಳಿ ಮಾಡುತ್ತಿದ್ದರು. ಹೀಗಾಗಿಯೇ ಪ್ರತಾಪ್​ ಸಿಂಹ ಕೋರ್ಟ್ ಮೊರೆ ಹೋಗಿದ್ದಾರೆ.

ಸಂಸದ ಪ್ರತಾಪಸಿಂಹ ವಿರುದ್ಧ ಎಂ.ಲಕ್ಷ್ಮಣ್ ಅವರು ಹೇಳಿಕೆಗಳನ್ನು ನೀಡಿದ್ದಾರೆ. ಪ್ರತಾಪ್ ಸಿಂಹ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕೆ ಇನ್ನೊಂದು ‘M’ ಸೇರಿಸಿಕೊಂಡಿದ್ದಾರೆ. ‘M’ ಅಂದರೆ mockery ಪ್ರತಾಪ್ ಸಿಂಹ ಅಂತ ಹೇಳಬಹುದು ಎಂದು ಎಂ.ಲಕ್ಷ್ಮಣ್​ ವ್ಯಂಗ್ಯವಾಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ತಾನು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಲಕ್ಷ್ಮಣ್, 2 ಲಕ್ಷ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅದು ಉಲ್ಟಾ ಆಗುತ್ತದೆ. ಅವರು 2 ಲಕ್ಷ ಅಂತರದಲ್ಲಿ ಸೋಲುತ್ತಾರೆ ಎಂದು ವಾಗ್ದಾಳಿ ಮಾಡಿದ್ದರು.

ಮೈಸೂರಿಗೆ ಸಂಸದ ಪ್ರತಾಪ್​ ಸಿಂಹ ಅವರ ಕೊಡುಗೆ ಏನು? ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಮತ್ತು ಪ್ರತಾಪ್​ ಸಿಂಹ ಸಾಧನೆ ಏನು ಎಂಬುವುದರ ಕುರಿತು ಚರ್ಚೆಯಾಗಲಿ. ಈ ಬಗ್ಗೆ ಸಂಸದರ ಕಚೇರಿ ಬಳಿ ಬಹಿರಂಗ ಚರ್ಚೆ ನಡೆಸಲಿ. ನಾವು ಸಿಎಂ ಸಿದ್ದರಾಮಯ್ಯ ಅವರ ಕೆಲಸಗಳ ದಾಖಲೆ ತರುತ್ತೇವೆ ಎಂದು ಸವಾಲು ಹಾಕಿದ್ದರು.

ನಿಮ್ಮ ಸುಳ್ಳು, ನಿಮ್ಮ ಡೋಂಗಿತನ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕಿಡಿಗೇಡಿಗಳನ್ನು ಗೆಲ್ಲಿಸಬೇಡಿ ಅಂತಾ ಕೈ ಮುಗಿದಿದ್ದಾರೆ. ಇದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದ್ದರು.

ಇನ್ನು ಕೊಡಗು ಜಿಲ್ಲೆಗೆ ತಾವು ನೀಡಿದ ಭರವಸೆಗಳನ್ನು ಈಡೇರಿಸಲಾಗದ ಪ್ರತಾಪ್ ಸಿಂಹ ಅವರು ಸುಳ್ಳು ಹೇಳುವ ಮೂಲಕ ಪಲಾಯನವಾದ ಮಾಡಿದ್ದಾರೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದ್ದರು. ಹೀಗೆ ಸಾಕಷ್ಟು ಪ್ರತಾಪ್ ಸಿಂಹ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದಾರೆ.

Comments (0)

Your email address will not be published. Required fields are marked *

Back to top button