ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮೆಹಜಬೀನ್ ಹೊರ್ತಿ ಅವರು ಟಾಂಗಾ ಸವಾರಿ ಮೂಲಕ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಆಗಮಿಸಿದ್ದಾರೆ. ಹಾಗೂ ಇದೇ ವೇಳೆ ತನ್ನದೇ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರ್ ರನ್ನು ಉದಾಸೀನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳೆಯ ವಾಹನ ನೀಡಿದ್ದಕ್ಕೆ ಹಾಗೂ ವಾಹನ ಚಾಲಕ ನೇಮಕ ಮಾಡದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮೆಹಜಬೀನ್ ಹೊರ್ತಿ ಅವರು ಟಾಂಗಾ ಸವಾರಿ ಮೂಲಕ ಸಭೆಗೆ ಆಗಮಿಸಿದರು. ಇಂದು ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಮೇಯರ್ ಮೆಹಜಬೀನ್ ಟಾಂಗಾದಲ್ಲಿ ಆಗಮಿಸಿದರು.
ಈ ಬಗ್ಗೆ ಮಾತನಾಡಿದ ಮೇಯರ್, ಪಾಲಿಕೆಯಿಂದ ಹಳೆಯ ವಾಹನ ನೀಡಲಾಗಿದೆ. ಚಾಲಕನನ್ನೂ ನೀಡಿಲ್ಲ. ಹಳೆಯ ವಾಹನದಲ್ಲಿ ಓಡಾಡಲು ಆಗುತ್ತಿಲ್ಲ. ಚಾಲಕನೂ ಇಲ್ಲದೇ ಹೇಗೆ ಉಪಯೋಗಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರ್ ರನ್ನು ಉದಾಸೀನ ಮಾಡಲಾಗುತ್ತಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರೂ ಸ್ಪಂಧಿಸಿಲ್ಲ ಎಂದು ಮೇಯರ್ ಮೆಹಜಬೀನ್ ಹೊರ್ತಿ ಆರೋಪ ಮಾಡಿದ್ದಾರೆ.
ಇನ್ನು ಟಾಂಗಾ ಮೂಲಕ ಆಗಮಿಸಿ ಪಾಲಿಕೆಯ ಸಾಮಾನ್ಯ ಸಭೆಗೆ ಹಾಜರಾದ ಮೇಯರ್ ನಡೆಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆಯ ನಿಮಯದಂತೆ ನೂತನ ವಾಹನ ಖರೀದಿ ಮಾಡಲು, ಬಾಡಿಗೆ ವಾಹನ ಪಡೆಯಲು ಅವಕಾಶವಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಸ್ವಪಕ್ಷದವರ ವಿರುದ್ಧವೇ ಗುಡುಗಿರುವ ಮೇಯರ್ ನಡೆ ಕುರಿತು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.