ಹುಬ್ಬಳ್ಳಿ : ಬಿಜೆಪಿಯವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಉದ್ಘಾಟನೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗದ್ದನ್ನು ನಾವು ಖಂಡಿಸುತ್ತೇವೆ. ಇದು ಯಾರು ಒಪ್ಪುವ ಮಾತಲ್ಲ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ ಕಾಂಗ್ರೆಸ್, ಬಿಜೆಪಿಯ ಪೂರ್ವಜರು ಅಂದ್ರೆ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ನವರು ಯಾರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೆ ಕಾಂಗ್ರೆಸ್ ಪಕ್ಷ. ನಮಗೆ ಇರುವಷ್ಟು ದೇಶಾಭಿಮಾನ ಬಿಜೆಪಿಯವರಿಗೆ ಇಲ್ಲ. ಅವರು ದ್ವೇಷ ಪ್ರೇಮಿಗಳು ,ನಾವೇ ನಿಜವಾದ ದೇಶ ಪ್ರೇಮಿಗಳು ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವ ವಿಚಾರವಾಗಿ ಈಗಾಗಲೇ ಎಫ್ಎಸ್ಎಲ್ ವರದಿ ಅಧಿಕೃತ ಎಂದು ಗೃಹ ಮಂತ್ರಿಗಳು ಹೇಳಿದ್ದಾರೆ. ಅದರಂತೆ ಕ್ರಮ ಜರುಗಿಸಲಾಗಿದ್ದು, ಮುಂದೆ ಕೋರ್ಟ್ ಈ ಪ್ರಕ್ರಿಯೆ ನೋಡಿಕೊಳ್ಳಲಿದೆ ಎಂದರು.
ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಬಿಜೆಪಿಯವರು ಏನೂ ಮಾಡುತ್ತಿದ್ದರು, ಆಗ ಯಾಕೆ ಘಟನೆಯನ್ನು ಖಂಡಿಸಿಲ್ಲ, ಪಾರ್ಲಿಮೆಂಟ್’ನಲ್ಲಿ ಗ್ಯಾಸ್ ಬಾಂಬ್ ಹಾಕಿದ್ದರು, ಆಗ ಯಾಕೆ ಬಿಜೆಪಿ ಖಂಡಿಸಿಲ್ಲ, ಪ್ರತಾಪ್ ಸಿಂಹ ಯಾಕೆ ನೈತಿಕತೆ ಹೊತ್ತು ರಾಜೀನಾಮೆ ಕೊಡಲು ಬಿಜೆಪಿಯವರು ಒತ್ತಾಯಿಸಲಿಲ್ಲ, ಈ ಕುರಿತು ಮಾತನಾಡಿದರೇ ಬಿದ್ದು ಹೋಗುತ್ತದೆ ಎನ್ನುವುದಕ್ಕೆ ಬಾಯಲ್ಲಿ ಬೆಣ್ಣೆ ಇಟ್ಟುಕೊಂಡಿದ್ದಾರಾ? ಎಂದು ಅವರು ಪ್ರಶ್ನೆ ಮಾಡಿದರು. ರಾಜಕಾರಣಿಗಳು ಬಂದಾಗ ಜನ ಸೇರುವುದು ಸಾಮಾನ್ಯ, ಅದರಲ್ಲಿ ಯಾರೋ ಒಬ್ಬರು ಕೂಗಿದರೇ, ನಾವು ಕೂಗಿದ ಹಾಗೇಯೇ? ಎಂದು ಪ್ರಶ್ನೆ ಮಾಡಿದರು.