ಹುಬ್ಬಳ್ಳಿ: ಸಂಸ್ಕೃತಿಗೆ ಅಂಟಿಕೊಂಡಿರುವ ಜಾತಿ ಪದ್ಧತಿ ಹೋಗಲಾಡಿಸಲು ಸಾಮಾಜಿಕ ಕ್ರಾಂತಿಯ ಅವಶ್ಯಕತೆಯಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಶರಣ ಸಮಗಾರ ಹರಳಯ್ಯನವರ ಜಯಂತೋತ್ಸವ ಅಂಗವಾಗಿ ನಡೆದ ಸದಸ್ಯತ್ವ ಅಭಿಯಾನ ಮತ್ತು ರಾಜ್ಯ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಯಲ್ಲಿ ಜಾತಿ ಪದ್ಧತಿ ರೂಢಿಯಲ್ಲಿರಲಿಲ್ಲ. ಕಳೆದ ಕೆಲ ಶತಮಾನಗಳಿಂದ ಜಾತಿ ಎಂಬ ಪಿಡುಗು ನಮ್ಮ ಸಂಸ್ಕೃತಿಗೆ ಅಂಟಿಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಗಾರ ಹರಳಯ್ಯನವರು ವಿಶಿಷ್ಟ ವಚನಗಳ ಮೂಲಕ ಕ್ರಾಂತಿ ಮಾಡಿ ಸಮಾಜದಲ್ಲಿ ಸ್ವಾಸ್ತ್ಯದ ಜ್ಯೋತಿ ಬೆಳಗಿಸಿದರು ಎಂದು ಸ್ಮರಿಸಿದ ಸಚಿವ ಜೋಶಿ, ಇಂದಿಗೂ ನಮ್ಮ ಸಂಸ್ಕೃತಿಗೆ ಅಂಟಿರುವ ಜಾತಿ ಪಿಡುಗನ್ನು ತೊಡೆದು ಹಾಕಬೇಕಿದೆ. ಇದಕ್ಕಾಗಿ ಮತ್ತೊಂದು ಕ್ರಾಂತಿಯ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಂಘ ಹಾಗೂ ಹರಳಯ್ಯ ಸಮಾಜ ಅಭಿವೃದ್ಧಿ ಮಹಾಮಂಡಲ ವತಿಯಿಂದ ಸಂತ ರವಿ ದಾಸರ ಹಾಗೂ ಮಹಾಶಿವ ಶರಣ ಸಮಗಾರ ಹರಳಯ್ಯನವರ ಜಯಂತೋತ್ಸವ ಪ್ರಯುಕ್ತ ಸದಸ್ಯತ್ವ ಅಭಿಯಾನ ಮತ್ತು ರಾಜ್ಯ ಪದಾಧಿಕಾರಿಗಳ ಸನ್ಮಾನ ಸಮಾರಂಭ ಹಮ್ಮಿಕೊಳ್ಳಗಿತ್ತು.
ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಸಮಗಾರ ಹರಳಯ್ಯ ಬಸವ ಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಗಾರ ಸಮಾಜದ ಅಧ್ಯಕ್ಷ ಜಗದೀಶ ಬೆಟಗೇರಿ, ಶಾಸಕರಾದ ಮಹೇಶ್ ತೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್.ಪಾಟೀಲ್ ಹಾಗು ಸಮಗಾರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.