ರಾಜಕೀಯರಾಜ್ಯಸುದ್ದಿ

ಅಯೋಧ್ಯೆ ಯಾತ್ರಾರ್ಥಿಗಳಿಗೆ ಬೆದರಿಕೆ ; ಕೈ ಕಟ್ಟಿ ಕುಳಿತ ಸರ್ಕಾರ : ಜೋಶಿ ಗುಡುಗು

ಹುಬ್ಬಳ್ಳಿ: ಅಯೋಧ್ಯೆಗೆ ತೆರಳುವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದಿರುವ ಕಿಡಿಗೇಡಿಗಳನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಇರುವಲ್ಲಿ ಇಂಥ ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರದ ಸಡಿಲ ನೀತಿಯಿಂದಲೇ ಇದಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಹಿಂದೂಗಳ ಮೇಲೆ, ಯಾತ್ರಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ನಡೆಯುತ್ತವೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥದ್ದಕ್ಕೆ ಉತ್ತೇಜನ ನೀಡುತ್ತದೆ ಎಂದು ಪ್ರಹ್ಲಾದ ಜೋಶಿ ಖಂಡಿಸಿದರು.

ಹೊಸಪೇಟೆಯಲ್ಲಿ ಅಯೋಧ್ಯೆ ಯಾತ್ರಿಗಳಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದೆ ಸಚಿವರು, ಕಾಂಗ್ರೆಸ್ ಸರ್ಕಾರ ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಯಾತ್ರಾರ್ಥಿಗಳು ಅಯೋಧ್ಯೆ ಮಾತ್ರವಲ್ಲ, ಮೆಕ್ಕಾ- ಮದೀನಕ್ಕೂ ತೆರಳುತ್ತಿರುತ್ತಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಿ ಬರುತ್ತಾರೆ. ಆದರೆ, ಅಪರಾಧ ಮನಸ್ಥಿತಿಯುಳ್ಳವರು ಯಾತ್ರಾರ್ಥಿಗಳಿಗೆ ಬೆದರಿಕೆ ಹಾಕುತ್ತಾರೆ ಎಂದರೆ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವೇ ಕಾರಣ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅಂತಹವರು ತುಷ್ಟೀಕರಣಕ್ಕಾಗಿ, ಮತ ಬ್ಯಾಂಕ್‌ ಗಾಗಿ ಇಂಥದ್ದಕ್ಕೆಲ್ಲ ಉತ್ತೇಜನ ಕೊಡುತ್ತಾರೆ ಇದಾಗಬಾರದು. ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು ಎಂದರು. ಕಾಂಗ್ರೆಸ್ ಸರ್ಕಾರ ಇದೆ, ನಾವು ಏನು ಮಾಡಿದರೂ ನಡೆಯುತ್ತದೆ ಎಂಬುದು ಅಪರಾಧಿಗಳ ಮನಸ್ಥಿತಿ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಕಿಡಿಗೇಡಿಗಳು ಯಾರೇ ಇರಲಿ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.

ಕೇಂದ್ರದ ವಿರುದ್ಧ ನಿರ್ಣಯ ದುರ್ದೈವ: ವಿಧಾನ ಮಂಡಲದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿರುವುದು ಅತ್ಯಂತ ದುರ್ದೈವದ ಸಂಗತಿ. ಸಚಿವ ಎಚ್.ಕೆ. ಪಾಟೀಲ್‌ರಂತಹ ಹಿರಿಯರು ಸಿಎಂ ಒತ್ತಡದಿಂದ ಹೀಗೆ ಮಾಡಿದ್ದು ಘೋರ ದುರಂತ ಎಂದು ಜೋಶಿ ಹೇಳಿದರು.

15ನೆ ಹಣಕಾಸು ಆಯೋಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವೇ ಇತ್ತು. ಮೊದಲು 60000 ಕೋಟಿ ತೆರಿಗೆ ಹಂಚಿಕೆ ಹಣ ಬರುತ್ತಿತ್ತು. ಈಗ 2.85 ಲಕ್ಷ ಕೋಟಿ ದಾಟಿದೆ. ಇದನ್ನೇಕೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ? ಎಂದು ಪ್ರಶ್ನಿಸಿದ ಸಚಿವ ಜೋಶಿ, ತಮ್ಮ ವಿಫಲತೆಗಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

Comments (0)

Your email address will not be published. Required fields are marked *

Back to top button