ಚಿತ್ರದುರ್ಗ: ಪೊಲೀಸರ ಸೋಗಿನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೊರಳಲ್ಲಿದ್ದ ಸರ ಕದ್ದು, ಪರಾರಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ಜರುಗಿದೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ದಿಶಾ ಡಾಬ ಬಳಿ ಘಟನೆ ನಡೆದಿದೆ. ಪೊಲೀಸರ ಸೋಗಿನಲ್ಲಿ ಬಂದಿದ್ದ ಇಬ್ಬರು ಕಳ್ಳರು, ಮುಂದೆ ಕಳ್ಳರು ಇದ್ದಾರೆ, ಮಾಂಗಲ್ಯ ಸರವನ್ನ ಕೈಯಲ್ಲಿ ಇಟ್ಟುಕೊಳ್ಳಿ ಎಂದು ಸುಮಂಗಲ ಎಂಬ ಮಹಿಳೆಗೆ ಹೇಳಿದ್ದಾರೆ.
ಆ ಆಸಾಮಿಗಳ ಮಾತು ಕೇಳಿದ್ದ ಮಹಿಳೆ ಕೊರಳಲ್ಲಿ ಇದ್ದ ಚಿನ್ನದ ಸರ ತೆಗೆದು ಪೇಪರ್ ನಲ್ಲಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವ ವೇಳೆ, ಕಳ್ಳರು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಪಹರಿಸಲಾಗಿರುವ ಚಿನ್ನದ ಸರ ಅಂದಾಜು 1 ಲಕ್ಷ 80 ಸಾವಿರ ಮೌಲ್ಯದ್ದು ಎನ್ನಲಾಗಿದೆ. ಚಿನ್ನದ ಸರ ಕಳೆದುಕೊಂಡ ಮಹಿಳೆ ಬೆಂಗಳೂರಿನಿಂದ ಮಗಳನ್ನ ನೋಡಲು ಚಿತ್ರದುರ್ಗಕ್ಕೆ ಬಂದು ಬಸ್ ಇಳಿದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಸ್ಥಳಕ್ಕೆ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.