ಗದಗ: ಕಾಂಗ್ರೆಸ್ ಸರ್ಕಾರ ಇಡೀ ವರ್ಷ ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಸರ್ವ ಪ್ರಯತ್ನ ಮಾಡಿದೆ. ಅವರ ರಾಜಕೀಯ ಮಿತ್ರಪಕ್ಷ ಡಿಎಂಕೆ ಯವರನ್ನು ಸಂತೈಸುವುದೇ ಕೆಲಸ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರದಿಂದ ಕುಡಿಯಲು ನೀರಿಲ್ಲದಿದ್ದರೂ ಕೆಆರ್ ಎಸ್ ಜಲಾಶಯದಿಂದ ತಮಿಳನಾಡಿಗೆ ನೀರು ಹರಿಬಿಟ್ಟಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಕರ್ನಾಟಕ ಜನರ ಹಿತಾಸಕ್ತಿಗಿಂತ ಡಿಎಂಕೆ ಸಂತೈಸುವದೇ ಪ್ರಮುಖವಾಗಿ ಕಂಡು ಬಂದಿದೆ. ಹಲವಾರು ಬಾರಿ ನಾವು ಈ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಸರ್ವಪಕ್ಷ ಸಭೆ ಸೇರಿದಂತೆ, ವಿಧಾನಸಭೆಯಲ್ಲೂ ಹೇಳಿದ್ದೇವೆ. ಕರ್ನಾಟಕದ ಜನ ಇಂದು ನೀರಿಗೆ ಪರಿತಪಿಸುತ್ತಿದ್ದಾರೆ. ಬರಗಾಲ ಇದೆ. ಬೇಸಿಗೆ ಇದೆ. ಜಲಾನಯನ ಪ್ರದೇಶದ ಜನರಿಗೆ ನೀರಿಲ್ಲ. ಬೆಂಗಳೂರಿನ ಕುಡಿಯಲು ಜನತೆಗೆ ನೀರಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ರಾಜಕೀಯ ಮಹತ್ವದ್ದಾಗಿದೆ. ಇದು ಅತ್ಯಂತ ಖಂಡನೀಯ ಎಂದು ಹೇಳಿದರು.